Breaking
22 Mar 2026, Sun

ವಿಟ್ಲ: ಯುವಕರಿಂದ ಪ್ರವಾಹ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ

ವಿಟ್ಲ : ವಿಟ್ಲ ಭಾಗದಲ್ಲಿ ಭಾನುವಾರ ವ್ಯಾಪಕ ಮಳೆಯಾಗಿದ್ದು, ಮಧ್ಯಾಹ್ನ ಶುರುವಾದ ಭಾರೀ ಮಳೆಯಿಂದ ತೋಡು, ಕಿರು ಹೊಳೆಗಳಲ್ಲಿ ಪ್ರವಾಹ ನೀರು ಉಕ್ಕಿ ಹರಿದಿದ್ದು , ಇದೇ ವೇಳೆ ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಂಜೆ ವೇಳೆ ವ್ಯಕ್ತಿಯೊಬ್ಬರು ಸೇತುವೆಯಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ.ಕೂಡಲೇ ಅಲ್ಲೇ‌ ಇದ್ದ ಯುವಕರು ನದಿಯ ಪ್ರವಾಹವನ್ನೂ ಲೆಕ್ಕಿಸದೆ ಹಾರಿ ಈಜಾಡಿಕೊಂಡು ಹೋಗಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಅಪಾಯದಿಂದ ರಕ್ಷಿಸಿದ್ದಾರೆ.

ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್‌ ಸಿ.ಹೆಚ್ ಹಾಗೂ ಸುರೇಶ್ ಸಿ.ಎಚ್ ರಕ್ಷಣೆ‌ ಮಾಡಿದ ಯುವಕರು. 70ರ ಹರೆಯದ ಉಮ್ಮರ್ ರಕ್ಷಿಸಲ್ಪಟ್ಟವರು.ಉಮ್ಮರ್ ಅವರು ಹೊಳೆಗೆ ಬೀಳುವುದನ್ನು ನೋಡಿದ ಕೂಡಲೇ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇಬ್ಬರು ಯುವಕರು ನದಿಗೆ ಹಾರಿ ಈಜಾಡಿಕೊಂಡು ಹೋಗಿ ಉಮ್ಮರ್ ಅವರನ್ನು ರಕ್ಷಿಸಿದ್ದಾರೆ.ಕೂಡಲೇ ಸ್ಥಳದಲ್ಲಿದ್ದವರು ಸಹಕರಿಸಿದ್ದಾರೆ. ಯುವಕರ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಸೇತುವೆಗೆ ಯಾವುದೇ ರೀತಿಯ ತಡೆ ಇಲ್ಲದೆ ಇರುವುದು ಇದಕ್ಕೆ‌ ಕಾರಣವಾಗಿದೆನ್ನಲಾಗಿದೆ.

Leave a Reply

Your email address will not be published. Required fields are marked *