ಕಡಬ: ಉದ್ಯೋಗವಿಲ್ಲದೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕು ಐತ್ತೂರು ಗ್ರಾಮದ ಕೇರ್ಪಡ ಎಂಬಲ್ಲಿ ನಡೆದಿದೆ.
ಕೇರ್ಪಡ ನಿವಾಸಿ ಸುಜಯ್ (28) ಮೃತ ಯುವಕನಾಗಿದ್ದಾನೆ.

ಸಿವಿಲ್ ಇಂಜಿನಿಯರ್ ಆಗಿದ್ದ ಸುಜಯ್ ಉದ್ಯೋಗ ಇಲ್ಲ ಎಂದು ಕೊರಗಿ ಜಿಗುಪ್ಪೆಗೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಮತ್ತು ಹಾಸನದಲ್ಲಿ ಸುಮಾರು ಆರು ತಿಂಗಳ ಕಾಲ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ, ಬಳಿಕ ಜೀವನ ನಡೆಸಲು ಸಂಬಳ ಸಾಕಾಗುವುದಿಲ್ಲವೆಂದು ಕೆಲಸ ಬಿಟ್ಟು ಊರಿನಲ್ಲಿ ಕೃಷಿ ಮತ್ತು ಗ್ರಾಮ ಪಂಚಾಯಿತಿಯ ಸಣ್ಣಪುಟ್ಟ ಕಾಮಗಾರಿಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದ.

ಸರಿಯಾದ ಕೆಲಸ ಸಿಕ್ಕಿಲ್ಲ ಎಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಶನಿವಾರ ಮೃತರ ತಂದೆ ಸುಂದರ ಗೌಡ ತನ್ನ ಅಕ್ಕನ ಮನೆ ಕೊಡಿಂಬಾಳ ಗ್ರಾಮದ ಮಡ್ಯಡ್ಕಕ್ಕೆ ಶ್ರಾವಣ ಶನಿವಾರದ ಊಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಸುಜಯ್ ರಾತ್ರಿ ಹೊತ್ತು ಮನೆಯ ಹಿಂದುಗಡೆ ಇರುವ ಹಳೆಯ ಮನೆಯ ಛಾವಣಿಗೆ ಅಡ್ಡಲಾಗಿ ಹಾಕಲಾಗಿದ್ದ ಬಿದಿರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಡಬ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


