ಶಿರ್ವ: ರಸ್ತೆ ದಾಟಲು ನಿಂತಿದ್ದ ಸ್ಕೂಟರ್ಗೆ ಓವರ್ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿದ ಮಾರುತಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ದಾರುಣ ಘಟನೆ ಶಿರ್ವ ಪೆಟ್ರೋಲ್ ಪಂಪ್ ಮುಂಭಾಗ ಆ.7ರ ಶುಕ್ರವಾರ ರಾತ್ರಿ ಸುಮಾರು 7.30ಕ್ಕೆ ನಡೆದಿದೆ.

ಮೃತರನ್ನು ಶಿರ್ವ ಇಂದ್ರಪುರ ನಿವಾಸಿ ಹಾಗೂ ‘ಶಿರ್ವ ದೇವಿ ವೈಂಡಿಂಗ್ ಸೆಂಟರ್’ ಮಾಲಕ ಪ್ರಕಾಶ್ ಆಚಾರ್ಯ (45) ಎಂದು ಗುರುತಿಸಲಾಗಿದೆ.
ಪ್ರಕಾಶ್ ಆಚಾರ್ಯ ಅವರು ಪೆಟ್ರೋಲ್ ಪಂಪ್ ಎದುರಿನ ಕುತ್ಯಾರು ರಸ್ತೆಯ ಮೂಲಕ ಮನೆಗೆ ತೆರಳಲು ಮುಖ್ಯರಸ್ತೆಯ ಬದಿಯಲ್ಲಿ ಸ್ಕೂಟರ್ನಲ್ಲಿ ನಿಂತಿದ್ದರು. ಈ ವೇಳೆ ಬೆಳ್ಮಣ್ ಕಡೆಯಿಂದ ವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಕಾರು, ಮುಂಭಾಗದಲ್ಲಿದ್ದ ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿ ವಿರುದ್ಧ ದಿಕ್ಕಿಗೆ ತೆರಳಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರಕಾಶ್ ಆಚಾರ್ಯ ಅವರು ಗಂಭೀರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



