ಆಂಧ್ರಪ್ರದೇಶ: ಗಣೇಶ ಹಬ್ಬದ ಮೆರವಣಿಗೆಯ ವೇಳೆ ಕಾರಿನಡಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಪಾಡೇರು ಮಂಡಲದ ಚಿಂತಲವೀಧಿ ಎಂಬಲ್ಲಿ ನಡೆದಿದೆ.

ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು ಸ್ಕಾರ್ಪಿಯೋ ಕಾರು ಗಣೇಶ ಹಬ್ಬ ಆಚರಿಸುತ್ತಿದ್ದ ಭಕ್ತರಿಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗಣೇಶ ಮೆರವಣಿಗೆಯಲ್ಲಿ ನೂರಾರು ಮಂದಿ ಸಂಭ್ರಮದಿಂದ ಕುಣಿಯುತ್ತಿದ್ದು ಏಕಾ ಏಕಿ ನಡೆದ ಅಪಘಾತದಿಂದ ಭಕ್ತರು ಆಘಾತಗೊಂಡಿದ್ದಾರೆ.


ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಕಾರ್ಪಿಯೋ ಚಾಲಕ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದೆ. ಸ್ಥಳೀಯರು ಘಟನೆಯ ನಂತರ ಚಾಲಕನನ್ನು ಹಿಡಿದು ಥಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಅಧಿಕೃತವಾಗಿ ಎಫ್ಐಆರ್ ದಾಖಲಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



