ಕಡಬ: ಬಿಳಿನೆಲೆ ಗ್ರಾಮದಲ್ಲಿ ಜೀಪು ಪಲ್ಟಿಯಾಗಿ ಕೃಷಿಕರೋರ್ವರು ಮೃತಪಟ್ಟ ಘಟನೆ ಆ.07ರಂದು ನಡೆದಿದೆ.
ಮೃತರನ್ನು ಬಿಳಿನೆಲೆ ನಿವಾಸಿ ಧರ್ಮಪಾಲ(68) ಎಂದು ಗುರುತಿಸಲಾಗಿದೆ.

ಧರ್ಮಪಾಲ ಅವರು ಮಗನೊಂದಿಗೆ ಸುಂಕದಕಟ್ಟೆಯ ತೋಟಕ್ಕೆ ಔಷಧ ಸಿಂಪಡಿಸಿದ ಬಳಿಕ ತಮ್ಮದೇ ಜೀಪಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಮನೆ ಸಮೀಪದ ಮಣ್ಣಿನ ರಸ್ತೆಯಲ್ಲಿ ಜೀಪು ಮೇಲೇರದೇ ಇದ್ದುದರಿಂದ ಧರ್ಮಪಾಲ ಅವರು ಜೀಪಿನಿಂದ ಇಳಿದು ರಸ್ತೆ ಬದಿ ನಿಂತಿದ್ದರು. ಮಗ ಜೀಪನ್ನು ಹತ್ತಿಸಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿದ ಜೀಪ್ ಒಮ್ಮೆಲೇ ಹಿಮ್ಮುಖವಾಗಿ ಚಲಿಸಿ ಧರ್ಮಪಾಲರ ಮೇಲೆ ಮಗುಚಿ ಬಿದ್ದಿದೆ ಎನ್ನಲಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಧರ್ಮಪಾಲ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



