ಉಳ್ಳಾಲ: ಕುಡಿತದ ನಶೆಯಲ್ಲಿ ಮನೆಯ ಕಿಟಕಿಯ ಗಾಜನ್ನು ಕೈಯಲ್ಲೇ ಹೊಡೆದು ರಕ್ತಸ್ರಾವವಾಗಿ ಯುವಕನೊವ೯ ಸಾವನ್ನಪ್ಪಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡೂರು ಸೈಟ್ನಲ್ಲಿ ನಡೆದಿದೆ.
ಮೃತರು ಮಾಡೂರ್ ಸೈಟ್ ನಿವಾಸಿ ನಿತೇಶ್ ನಾಯಕ್ (38) ಎಂದು ತಿಳಿದುಬಂದಿದೆ.

ರಾತ್ರಿ ತಂದೆ ಮತ್ತು ಸಹೋದರನೊಂದಿಗೆ ಗಲಾಟೆ ಮಾಡಿ ಮನೆಯ ಮಹಡಿಗೆ ಹೋಗಿದ್ದು, ಗಲಾಟೆಯ ಸಿಟ್ಟಿನಲ್ಲಿ ಆಕ್ರೋಶದಿಂದ ಮನೆ ಮಹಡಿಯ ಕಿಟಕಿ ಗಾಜನ್ನು ಕೈಯಲ್ಲೇ ಒಡೆದಿದ್ದರಿಂದಾಗಿ ಕೈಯಿಂದ ತೀವ್ರ ರಕ್ತಸ್ರಾವ ಉಂಟಾಗಿದೆ. ಈ ಸಂದರ್ಭ ಮನೆ ಮಂದಿ ಮಲಗಿದ್ದು, ನೆರೆಮನೆಯ ಚಿಕ್ಕಮನ ಮಗಳಿಗೆ ಯಾರೋ ಕೂಗುವ ಸದ್ದು ಕೇಳಿ ಮನೆ ಮಂದಿಯನ್ನು ಎಬ್ಬಿಸಿ ಮಹಡಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಯುವಕನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರಾದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



