ಬಂಟ್ವಾಳ : ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಆರ್. ಎಸ್ ಎಸ್. ನಿಷೇಧಿಸುವ ತೀರ್ಮಾನ ಮಾಡುತ್ತೇವೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ನೀಡಿರುವ ದುರಹಂಕಾರದ, ದುರ್ನಡತೆಯ ಬೇಜವಾಬ್ದಾರಿ ಹೇಳಿಕೆಯನ್ನು ಬಂಟ್ವಾಳ ಬಿಜೆಪಿ ಮುಖಂಡರಾದ ಪ್ರಭಾಕರ ಪ್ರಭು ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಚಿವ ಪ್ರಿಯಾಂಕ ಖರ್ಗೆಯವರು ಮೊದಲು ತನ್ನ ಸಂಬಂಧ ಪಟ್ಟ ಖಾತೆಯ ಇಲಾಖೆಯಲ್ಲಿ ಲೋಪ ದೋಷಗಳನ್ನು ಸರಿಪಡಿಸುವಲ್ಲಿ ತೀರ್ಮಾನ ಮಾಡಲಿ, ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಗ್ರಾಮ ಪಂಚಾಯತ್ ಗಳಲ್ಲಿ ನೂರಾರು ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿ. ಅದು ಬಿಟ್ಟು ಕೈಯಲ್ಲಿ ಆಗದ ಇಲ್ಲಸಲ್ಲದ ದುಸಾಹಸಕ್ಕೆ ಆಲೋಚನೆ ಮಾಡೋದು ಬೇಡ. ಇದೆಲ್ಲಾ ಸಚಿವರ ವ್ಯಕ್ತಿತ್ವಕ್ಕೆ ತಕ್ಕದಾದ ಹೇಳಿಕೆ ಅಲ್ಲ.

ಆರ್. ಎಸ್. ಎಸ್. ಸ್ಥಾಪನೆಯಾದಗಿನಿಂದ ನಿಷೇದದ ಬಗ್ಗೆ ಮಾತನಾಡಿದ ಅದೆಷ್ಟೋ ಮಂದಿ ಅತೀ ಬುದ್ದಿವಂತರು ಹೇಳದೇ ಕೇಳದೇ ದೇಶದಲ್ಲಿ ಕಣ್ಮರೆ ಯಾಗಿದ್ದಾರೆ. ಅದ್ರೆ ಆರ್. ಎಸ್. ಎಸ್. ಮಾತ್ರ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ವಟವ್ರಕ್ಷದಂತೆ ಬೆಳೆದು ನಿಂತು ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ದೇಶ ವ್ಯಾಪ್ತಿಯಲ್ಲಿ ಮೀರಿಕೊಂಡು ಪ್ರಪಂಚದಾದ್ಯಂತ ಪಸರಿಸಿಕೊಂಡಿದ್ದು ಜಗತ್ತಿನ ಅತೀ ದೊಡ್ಡದಾದ ಸಂಘಟನೆಯಾಗಿ ಸಾಗರವಾಗಿ ಹೊರಹೊಮ್ಮಿರುವುದು ತಮಗೆ ತಿಳಿದಿರಿಲ್ಲವೇ?

2002 ರಲ್ಲಿ ಜನವರಿಯಲ್ಲಿ ಬೆಂಗಳೂರಿನ ನಾಗವರದಲ್ಲಿ ನಡೆದ ರಾಷ್ಟೀಯ ಸ್ವಯಂ ಸೇವಕ ಸಂಘದ ಸಮರಸತಾ ಸಂಗಮಕ್ಕೆ ತಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ನೆನಪಿಲ್ಲವೇ ಎಂದೂ ಪ್ರಶ್ನಿಸಿದ್ದಾರೆ. ಇಂತಹ ದೈತ್ಯ ಸಂಘಟನೆ ಬಗ್ಗೆ ಮಾತನಾಡುವ ನೈತಿಕತೆಯೇ ಸಚಿವ ಪ್ರಿಯಾಂಕ ಖರ್ಗೆಯಲ್ಲಿ ಇಲ್ಲ ಎಂದೂ ಪ್ರಭುರವರು ಟೀಕಿಸಿದ್ದಾರೆ.



