Breaking
23 Jul 2025, Wed

ಎಸ್. ಸಿ. ಐ. ಬಂಟ್ವಾಳ ನೇತ್ರಾವತಿ ಸಂಗಮ ಪದಗ್ರಹಣ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ : ಗಂಗಾಧರ ಆಳ್ವ

ಬಂಟ್ವಾಳ : ಸಮಾಜದಲ್ಲಿ ಜೀವನ ಮೌಲ್ಯಗಳು ಕುಸಿಯುತ್ತಿದ್ದು, ಆತ್ಮಹತ್ಯೆಯಂತಹ ದುರ್ಘಟನೆಗಳು ಹೆಚ್ಚಾಗುತ್ತಿವೆ. ಸಮಾಜಸೇವಾ ಸಂಘಟನೆಗಳು ಸಮಾಜ ಸೇವೆಯೊಂದಿಗೆ ಪ್ರಚಲಿತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಂಟ್ವಾಳ ಎಸ್.ವಿ.ಎಸ್. ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಗಂಗಾಧರ ಆಳ್ವ ಹೇಳಿದರು.

ಅವರು ಬಿ.ಸಿ.ರೋಡಿನ ಅಕ್ಷಯ ಸಭಾಂಗಣದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸೀನಿಯರ್ ಛೇಂಬರ್‌ನ ಮಾಜಿ ರಾಷ್ಟ್ರಾಧ್ಯಕ್ಷ ಡಾ. ಕೇದಿಗೆ ಅರವಿಂದ ರಾವ್ ಪದಗ್ರಹಣ ನೆರವೇರಿಸಿ ಮಾತನಾಡಿದರು . ಸೀನಿಯರ್ ಛೇಂಬರ್ ಸಂಸ್ಥೆಯು ಭಾರತದಲ್ಲಿ ಹುಟ್ಟಿ ಬೆಳೆದು ವಿದೇಶಗಳಲ್ಲಿಯೂ ಪಸರಿಸುತ್ತಿದೆ.  ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿರುವ ಜೇಸಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಅಧ್ಯಕ್ಷ ಕೆ. ಆದಿರಾಜ ಜೈನ್ ಸ್ವಾಗತಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಅಧ್ಯಕ್ಷರಾಗಿ ಟಿ.ತಾರನಾಥ ಕೊಟ್ಟಾರಿ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಶೈಲಜಾ ರಾಜೇಶ್, ಕೋಶಾಧಿಕಾರಿಯಾಗಿ ಹರಿಶ್ಚಂದ್ರ ಆಳ್ವ , ಜೊತೆಕಾರ್ಯದರ್ಶಿಯಾಗಿ ಯೋಗೀಶ ಬಂಗೇರ ಹಾಗೂ ಸುಜಾತ , ಸದಾನಂದ ಬಂಗೇರ ಸಾಯಿಲೀಲಾ ಅಧಿಕಾರ ಸ್ವೀಕರಿಸಿದರು.

ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ಪಿ.ಪಿ.ಎಫ್. ಜಯಾನಂದ ಪೆರಾಜೆ , ನಿಕಟಪೂರ್ವ ಅಧ್ಯಕ್ಷ ಡಾ. ಆನಂದ ಬಂಜನ್ ಇವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ನಾಗೇಶ್ ಕುಲಾಲ್ ಉಪಸ್ಥಿತರಿದ್ದರು. ನೂತನ ಸದಸ್ಯರಾಗಿ ಸಚ್ಚಿದಾನಂದ ರೈ ಪಾಳ್ಯ, ಸನ್ಮತಿ ಇಂದ್ರ ಪಾಣೆಮಂಗಳೂರು, ಪುರುಷೋತ್ತಮ ಕೊಟ್ಟಾರಿ ಕಳ್ಳಿಗೆ , ವೀಣಾ ಮೊಡಂಕಾಪು ಸೇರ್ಪಡೆಗೊಂಡರು. ರವೀಂದ್ರ ಕುಕ್ಕಾಜೆ ಸಾಂಸ್ಕೃತಿಕ  ಕಾರ್ಯಕ್ರಮ ನಡೆಸಿಕೊಟ್ಟರು.

ಘಟಕದ ಮಾತೃ ಸಂಸ್ಥೆಯ ಮಾಜಿ ಅಧ್ಯಕ್ಷ ಹರಿಪ್ರಸಾದ್ ರೈ ಮಂಗಳೂರು , ಪುತ್ತೂರು ಘಟಕದ ಅಧ್ಯಕ್ಷೆ ಮಲ್ಲಿಕಾ ಜೆ. ರೈ , ವರ್ತಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ,ನ್ಯಾಯವಾದಿ ಅಶ್ವನಿ ಕುಮಾರ್ ರೈ, ಪುರಸಭಾ ಸದಸ್ಯ ಸದಾಶಿವ ಬಂಗೇರ ಶುಭಹಾರೈಸಿದರು. ಪತ್ರಕರ್ತ ಸಂದೀಪ್ ಸಾಲ್ಯಾನ್ ನಿರೂಪಿಸಿದರು.

Leave a Reply

Your email address will not be published. Required fields are marked *