ಮಂಗಳೂರು: ಕೋಡಿಕಲ್ ನಲ್ಲಿ ಯುವಕನೋರ್ವ ಆ್ಯಪ್ಗಳಲ್ಲಿ ಸಾಲ ಪಡೆದು ತೀರಿಸಲಾಗದೇ ಆರ್ಥಿಕ ಹೊರೆಯಿಂದ ಬೇಸತ್ತು ನೇಣಿಗೆ ಶರಣಾದ ಘಟನೆ ನಡೆದಿದೆ.
ಮೃತಪಟ್ಟ ಯುವಕ ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಎಂದು ಗುರುತಿಸಲಾಗಿದೆ.

ನಿಖಿಲ್ ಪೂಜಾರಿ ಬೆಳಗ್ಗೆ ಮನೆಯಲ್ಲಿ ಉಪಹಾರ ಸೇವಿಸಿ ನಂತರ ತಮ್ಮ ಕೋಣೆ ತೆರಳಿದ್ದರು. ಆ ಬಳಿಕ ಅವರು ಕೋಣೆಯಿಂದ ಹೊರ ಬಂದಿರಲಿಲ್ಲ. ಸಂಜೆಯವರೆಗೆ ಅವರು ಮಲಗುವ ಅಭ್ಯಾಸ ಇರುವ ಕಾರಣ ಮನೆಯವರು ಅತ್ತ ಕಡೆ ಹೆಚ್ಚಿನ ಗಮನ ಹರಿಸಿರಲಿಲ್ಲ.

ಸಂಜೆ ವೇಳೆಗೆ ಕೋಣೆಯಿಂದ ಹೊರ ಬಾರದ ನಿಖಿಲ್ ಬಾಗಿಲು ಬಡಿದರೂ ತೆಗೆಯಲಿಲ್ಲ. ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆದ್ದರಿಂದ ಬಾಗಿಲಿನ ಎಡೆಯಿಂದ ನೋಡಿದಾಗ ನಿಖಿಲ್ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ನಿಖಿಲ್ ವಿವಿಧ ಆ್ಯಪ್ ಗಳಲ್ಲಿ ಸಾಲ ಪಡೆದಿದ್ದು ಆರ್ಥಿಕ ಹೊರೆಯಿತ್ತು ಎಂಬುದು ಗಮನಕ್ಕೆ ಬಂದಿದೆ. ಈ ಕುರಿತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


