ಬೆಳ್ತಂಗಡಿ: ಮನನೊಂದು ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನ್ಯಾಡಿಯಲ್ಲಿ ಜೂನ್ 23ರ ರಾತ್ರಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಧರ್ಮಸ್ಥಳ ಕನ್ಯಾಡಿಯ ಮತ್ತಿಲ ನಿವಾಸಿ ಶಿವರಾಜ್ ಮತ್ತಿಲ (27) ಎಂದು ಗುರುತಿಸಲಾಗಿದೆ.

ಕೂಲಿ ಕೆಲಸ ಮಾಡುತ್ತಿದ್ದ ಶಿವರಾಜ್ ವಿಪರೀತ ಮದ್ಯ ಸೇವನೆಯ ಅಭ್ಯಾಸವನ್ನು ಹೊಂದಿದ್ದರು. ಸುಮಾರು 4 ತಿಂಗಳ ಹಿಂದೆ ಮಡಿಕೇರಿಯ ಕುಶಾಲನಗರ ನಿವಾಸಿ ಆಶ್ವಿನಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಬಳಿಕ ಆಕೆ ಪತಿಯನ್ನು ತೊರೆದು ಹೋಗಿದ್ದರು. ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ವಿಪರೀತ ಮದ್ಯ ಸೇವನೆ ಮಾಡಿ ಬಂದ ಶಿವರಾಜ್, ತಾಯಿ ಮತ್ತು ಪತ್ನಿಯ ನಡುವಿನ ಜಗಳದ ಕಾರಣ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಆರೋಪಿಸಿ ತಾಯಿಯೊಂದಿಗೆ ಗಲಾಟೆ ಮಾಡಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ಮನೆಯ ಬಾಗಿಲು ಹಾಕಿ ಒಳಗಡೆ ನೇಣು ಬಿಗಿದುಕೊಂಡಿದ್ದಾರೆ.

ಇದನ್ನು ಗಮನಿಸಿದ ತಾಯಿ ತಕ್ಷಣ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಪರಿಶೀಲಿಸಿದಾಗ ಮೃತಪಟ್ಟಿರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


