Breaking
21 Jun 2025, Sat

ಬೈಕ್ ಸಮೇತ ನದಿ ನೀರಿನಲ್ಲಿ ಕೊಚ್ಚಿ ಹೋದ ಯುವಕರು ಪವಾಡ ಸದೃಶ ರೀತಿಯಲ್ಲಿ ಪಾರು

ಬೆಳ್ತಂಗಡಿ : ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪ ಯುವಕರಿಬ್ಬರು ಬೈಕ್ ಸಮೇತ ನದಿ ನೀರಿನಲ್ಲಿ ಕೊಚ್ಚಿ ಹೋಗಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದ ಘಟನೆ ಜೂನ್‌ 15ರಂದು ನಡೆದಿದೆ.

ಅಪಾಯದಿಂದ ಪಾರಾದ ಯುವಕರು ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂದು ತಿಳಿದುಬಂದಿದೆ.

ಇವರು ಕೆಲಸಕ್ಕೆ ಹೋಗುವಾಗ ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುತ್ತಿರುವ ನದಿಯಲ್ಲಿ ಬೈಕ್ ಸಮೇತ ದಾಟುತ್ತಿದ್ದರು. ಈ ವೇಳೆ ನದಿ ನೀರಿನಲ್ಲಿ ಕೊಚ್ಚಿ ಹೋದ ಇವರ ಬೈಕ್ ನದಿ ಬದಿಯಲ್ಲಿ ಅದೃಷ್ಟವಶಾತ್ ಸಿಲುಕಿಕೊಂಡಿದೆ ಎನ್ನಲಾಗಿದ್ದು, ಕೂಡಲೇ ಯುವಕರಿಬ್ಬರು ಕೈಗೆ ಸಿಕ್ಕ ಯಾವುದೋ ಬಳ್ಳಿಯ ಸಹಾಯದಿಂದ ಪಾರಾಗಿ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದು , ಈ ನದಿ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಹರಿಯುತ್ತದೆ. ಈ ನದಿಗೆ ಸೇತುವೆ ನಿರ್ಮಿಸಲು ವನ್ಯಜೀವಿ ಅರಣ್ಯ ಇಲಾಖೆಯ ಕಾನೂನು ಅಡ್ಡಿ ಪಡಿಸುತ್ತದೆ. ಈ ಕಾರಣಕ್ಕಾಗಿ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ.

ಈ ಪ್ರದೇಶದಲ್ಲಿ ಸುಮಾರು 9 ಕುಟುಂಬಗಳು ವಾಸಿಸುತ್ತಿದ್ದು , ಸುಮಾರು 60 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರದೇಶಕ್ಕೆ ಸಂವಿಧಾನಬದ್ದ ಮೂಲಭೂತ ಸೌಕರ್ಯಗಳಾದ ವಿದ್ಯುತ್ , ರಸ್ತೆ ಸಂಪರ್ಕವಿಲ್ಲದೆ ಒಂದುವರೆ ಶತಮಾನಗಳೇ ಕಳೆದಿದೆ. ಈ ಪ್ರದೇಶಕ್ಕೆ ಇರುವ ಏಕೈಕ ರಸ್ತೆ ಇದಾಗಿದ್ದು , ಮಳೆಗಾಲದಲ್ಲಿ ಜೀವದ ಹಂಗು ತೊರೆದು ಈ ನದಿಯನ್ನು ದಾಟಿ ಹೋಗುವ ಪರಿಸ್ಥಿತಿ ಈ ಕುಟುಂಬದ್ದಾಗಿದೆ. ಸರ್ಕಾರ ಆದಿವಾಸಿಗಳ ಬಗ್ಗೆ ಒಂದೊಮ್ಮೆ ಮೇಲಿಂದಮೇಲೆ ಸಭೆ ನಡೆಸಿದರೂ ಅಭಿವೃದ್ಧಿ ಕೇವಲ ಮರಿಚೀಕೆಯಾಗಿದೆ. ಸೇತುವೆ ನಿರ್ಮಾಣವಾಗುವ ತನಕ ತಾತ್ಕಾಲಿಕ ಕಾಲುಸಂಕ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡಬೇಕು. ಈ ಹಿಂದೆ ತಾತ್ಕಾಲಿಕ ಕಾಲುಸಂಕ ನಿರ್ಮಾಣದ ಸಂದರ್ಭದಲ್ಲಿ ಕೇಸ್ ಹಾಕಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

Leave a Reply

Your email address will not be published. Required fields are marked *