ಕುಂದಾಪುರ: ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಗಂಭೀರ ಗಾಯಗೊಂಡಿರುವ ಘಟನೆ ಹಾರ್ದಳ್ಳಿ ಮಂಡಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಜನ್ನಾಡಿ ಪ್ರದೇಶದಲ್ಲಿ ಜೂನ್ 15 ರಂದು ನಡೆದಿದೆ.
ಗಾಯಗೊಂಡವರು ನರಸಿಂಹ ಮರಕಲ್ (52) ಮತ್ತು ಬಾಬಿ (46) ಎಂದು ಗುರುತಿಸಲಾಗಿದೆ.

ಉಲ್ಲೂರು 74 ರಿಂದ ಕೊರ್ಗಿ ಕಡೆಗೆ ತಮ್ಮ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿತ್ರದುರ್ಗದಿಂದ ಉಡುಪಿಗೆ ಟೈಲ್ಸ್ ಸಾಗಿಸುತ್ತಿದ್ದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಸ್ಕೂಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ದಂಪತಿಗಳ ತಲೆ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗಳಾಗಿದೆ. ಅವರನ್ನು ತಕ್ಷಣ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊರ್ಗಿ ಗ್ರಾಮ ಪಂಚಾಯತ್ನ ಸಿಬ್ಬಂದಿ ಮತ್ತು ಗಾಯಾಳುಗಳ ಸಂಬಂಧಿ ಗಣೇಶ್ ಮರಕಲ್ ತಿಳಿಸಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


