ಬಂಟ್ವಾಳ: ಶಿಬಿರದ ಮೂಲಕ ಮದ್ಯವ್ಯಸನಿಯ ಮನವೊಲಿಸಿ ದುಷ್ಚಟವನ್ನು ನಿರ್ಮೂಲನಗೊಳಿಸುವುದರ ಜೊತೆಗೆ ಊರಿನ ಗೂಡಂಗಡಿಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುವ ವ್ಯಾಪಾರಿಗಳ ಮನವೊಲಿಸಿ ಮದ್ಯ ಮಾರಾಟ ಮಾಡದಂತೆ ಜಾಗೃತಗೊಳಿಸುವ ಕಾರ್ಯವು ಆಗಬೇಕಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಮೋಂತಿಮಾರು ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಇದರ ವಿಸ್ತರಣ ಕಾರ್ಯಕ್ರಮದ ಅಂಗವಾಗಿ ಮೋಂತಿಮಾರಿನ ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆದ 1937ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕುಡಿತದ ಚಟದಿಂದಾಗಿ ಅನೇಕ ಕುಟುಂಬಗಳು ಇಂದು ಬಲಿಪಶುವಾಗಿದೆ. ಈ ದಿನ ಕುಡಿತಕ್ಕೊಳಗಾದವರ ಕುಟುಂಬ ಸಂತೋಷ ಪಡುವ ದಿನ. ಪರಿವರ್ತನೆಯ ಕಾಲಘಟದಲ್ಲಿ ಸರಕಾರ ಎಷ್ಟು ಸವಲತ್ತುಗಳನ್ನು ನೀಡಿದರೂ ದುಶ್ಚಟದಿಂದಾಗಿ ಅದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಡಾ. ವಿರೇಂದ್ರ ಹೆಗ್ಗಡೆಯವರ ಅಪೇಕ್ಷೆಯ ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಶುಭ ಹಾರೈಸಿದರು.

ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಎಸ್. ಆರ್. ಸತೀಶ್ಚಂದ್ರ ಶಿಬಿರ ಉದ್ಘಾಟಿಸಿ ಮಾತನಾಡಿ ಇದೊಂದು ದೇವರ ಕೆಲಸ. ಗ್ರಾಮಭಿವೃದ್ದಿ ಯೋಜನೆಯ ಮದ್ಯ ವರ್ಜನ ಶಿಬಿರದಿಂದ ಸಮಾಜದಲ್ಲಿ ಮಹತ್ತರವಾದ ಬದಲಾವಣೆಯಾಗಿದೆ. ಕುಡಿತದ ಚಟದಿಂದ ಮುಕ್ತರಾಗಿಸುವುದು ಸಮುದಾಯದ ಜವಬ್ದಾರಿಯಾಗಿದ್ದು ಪ್ರತಿಯೊಬ್ಬರು ಇದರಲ್ಲಿ ಕೈ ಜೋಡಿಸಿದಾಗ ಶಿಬಿರ ಯಶಸ್ವಿಯಾಗಲು ಸಾಧ್ಯವಿದೆ ಎಂದರು.
1937ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಪ್ರಸಾದ್ ರೈ ತಿರುವಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶ ಅಭಿವೃದ್ದಿಯಾಗ ಬೇಕಾದರೆ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು. ಎಲ್ಲಾ ವ್ಯಸನದಿಂದ ಮುಕ್ತಿ ಪಡೆದು ಸಮಾಜಮುಖಿ ಕಾರ್ಯದಲ್ಲಿ ವ್ಯಕ್ತಿ ತೊಡಗಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯವಿದೆ. 8 ದಿನದ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ, ವಿಟ್ಲ ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷ ಸಂಜೀವ ಪೂಜಾರಿ, ಕಣಂತೂರು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ಪ್ರಗತಿ ಬಂಧು ಸ್ವಸಹಾಯ ಸಂಘದ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣಂತೂರು, ಮಂಚಿ ಗ್ರಾ.ಪಂ.ಅಧ್ಯಕ್ಷ ಇಬ್ರಾಹಿಂ, ಮಂಚಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಎಂ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ಕಚೇರಿ ನಿರ್ದೇಶಕ ಗಣೇಶ್ ಆಚಾರ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ವಿಟ್ಲ ವಲಯ ಯೋಜನಾಧಿಕಾರಿ ಸುರೇಶ್ ಗೌಡ ಸ್ವಾಗತಿಸಿದರು.ಮೇಲ್ವಿಚಾರಕಿ ಸವಿತಾ ವಂದಿಸಿದರು.ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ , ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೋಂತಿಮಾರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ, ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ, ಲಯನ್ಸ್ ಕ್ಲಬ್ ವಿಟ್ಲ, ನವಜೀವನ ಸಮಿತಿ ವಿಟ್ಲ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವಿಟ್ಲ ಶಿಬಿರಕ್ಕೆ ಸಹಯೋಗ ನೀಡಿತ್ತು.
