ಮುಲ್ಕಿ: ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದಲ್ಲಿ ಮುಲ್ಕಿ ಮೂಲದ ಯುವತಿಯೋರ್ವರು ಮೃತಪಟ್ಟಿದಾರೆ.
ಮೃತರು ಅಕ್ಷತಾ (27) ಎಂದು ತಿಳಿದುಬಂದಿದೆ.

ಅಕ್ಷತಾ ಸಿ.ಎ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾಶಾಲಿ ಯುವತಿಯಾಗಿದ್ದು, ಒಂದು ವರ್ಷದ ಹಿಂದೆ ಸಿದ್ದಾಪುರದ ಇಂಜಿನಿಯರ್ ಆಶಯ್ ಅವರನ್ನು ವಿವಾಹವಾಗಿದ್ದಳು.
ಇಬ್ಬರೂ ಆರ್ಸಿಬಿ ಅಭಿಮಾನಿಗಳಾಗಿ, ರೋಡ್ ಶೋದಲ್ಲಿ ಪಾಲ್ಗೊಳ್ಳಲು ರಜೆ ತೆಗೆದುಕೊಂಡು ಟೀಶರ್ಟ್ ಧರಿಸಿ ಹೊರಟಿದ್ದರು. ರೋಡ್ ಶೋ ರದ್ದಾದ ಕಾರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ಹೋಗಿದ್ದರು. ಗೇಟ್ ನಂ.17 ಬಳಿ ನಡೆದ ಕಾಲ್ತುಳಿತದಲ್ಲಿ ಗಂಡ-ಹೆಂಡತಿ ಬೇರೆಯಾಗಿದ್ದಾರೆ.
ಈ ವೇಳೆ ಅಕ್ಷತಾ ಜನದಟ್ಟಣೆಯಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.



