ಕಾಸರಗೋಡು: ಪ್ರವಾಹಕ್ಕಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟು,ಮತ್ತೊರ್ವರು ಅಪಾಯದಿಂದ ಪಾರಾದ ಘಟನೆ ಕಾಸರಗೋಡುವಿನ ಮಧೂರು ಪಟ್ಲ ಮೊಗರ್ ಎಂಬಲ್ಲಿ ನಡೆದಿದೆ.
ಪಾಲಕುನ್ನು ಕರಿಪ್ಪೊಡಿಯ ನಿವಾಸಿ ಸಾದಿಕ್ (39) ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದು, ಅವರ ಪತ್ನಿಯ ಸಹೋದರ ಮೊಯ್ದು ಅಪಾಯದಿಂದ ಪಾರಾಗಿದ್ದಾರೆ.

ಪತ್ನಿ ಮನೆಗೆ ಬಂದಿದ್ದ ಸಾದಿಕ್ ಅವರು ಬಯಲಿನಲ್ಲಿ ಸಂಬಂಧಿಕರೋರ್ವರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ಮೊಯ್ದು ಅವರು ಸಾದಿಕ್ ಅವರನ್ನು ರಕ್ಷಿಸಲು ಮುಂದಾದರೂ ತಾನೂ ಕೂಡಾ ಪ್ರವಾಹದಲ್ಲಿ ಸಿಲುಕಿದ್ದು, ಕೊನೆಗೂ ದಡ ಸೇರುವಲ್ಲಿ ಸಫಲರಾಗಿದ್ದಾರೆ.

ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಘಟನೆ ನಡೆದ ಅಲ್ಪ ದೂರದಿಂದ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.
ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಸಂಬಂಧಿಕರಿಗೆ ಮೃತದೇಹವನ್ನು ಬಿಟ್ಟುಕೊಡಲಾಗಿದೆ.



