ನವದೆಹಲಿ: ನಿಷೇದಿತ ಸಂಘಟನೆಯ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಜೈಲುಶಿಕ್ಷೆ ಅನುಭವಿಸಿದ ನಂತರ ತನ್ನ ಗಡೀಪಾರು ಪ್ರಶ್ನಿಸಿ ಭಾರತದಲ್ಲೇ ಆಶ್ರಯ ಕೋರಿದ್ದ ಶ್ರೀಲಂಕಾ ಪ್ರಜೆಯೊಬ್ಬನ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.
ಅಷ್ಟೇ ಅಲ್ಲದೆ ‘ಭಾರತವು ಪ್ರಪಂಚದಾದ್ಯಂತ ಇರುವ ನಿರಾಶ್ರಿತರಿಗೆ ಆಶ್ರಯ ನೀಡಲು ಇರುವ ಧರ್ಮಶಾಲೆಯಲ್ಲ’ ಎಂದು ಕಟುವಾಗಿ ನುಡಿದಿದೆ.

ಶ್ರೀಲಂಕಾ ಪ್ರಜೆಯಾಗಿರುವ ಅರ್ಜಿ ದಾರ, ಎಲ್ ಟಿ ಟಿ ಸಂಘಟನೆಯೊಂದಿಗೆ ಗುರುತಿಸಿಕೊಂಡು 2015 ರಲ್ಲಿ ಭಾರತದಲ್ಲಿ ಬಂಧನಕ್ಕೊಳಗಾಗಿದ್ದ. 2018ರಲ್ಲಿ ವಿಚಾರಣಾ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿ 10 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ನಂತರ ಮದ್ರಾಸ್ ಹೈಕೋರ್ಟ್ ಶಿಕ್ಷೆಯನ್ನು 1 ವರ್ಷಗಳಿಗೆ ಕಡಿತಗೊಳಿಸಿ, ಶಿಕ್ಷೆ ಮುಗಿದ ತಕ್ಷಣ ದೇಶ ತೊರೆಯುವಂತೆ ಆದೇಶಿಸಿತ್ತು. ಆದರೆ ಶಿಕ್ಷೆ ಮುಗಿದ ನಂತರ ಲಂಕಾ ಪ್ರಜೆ ಭಾರತ ತೊರೆಯಲು ನಿರಾಕರಿಸಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ, ‘ನಾವು ಭಾರತದಲ್ಲಿರುವ 140 ಕೋಟಿ ಜನಸಂಖ್ಯೆಯೊಂದಿಗೆ ಕಷ್ಟಪಡುತ್ತದ್ದೇವೆ. ಇದು ಎಲ್ಲೆಡೆಯಿಂದ ಬರುವ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡುವ ಧರ್ಮಶಾಲೆ ಯಲ್ಲ. ಇಲ್ಲಿ ನೆಲೆಸಲು ನಿಮಗೆ ಯಾವ ಹಕ್ಕಿದೆ?’ ಎಂದು ತೀಕ್ಷ್ಮವಾಗಿ ಪ್ರಶ್ನಿಸಿ ಲಂಕಾ ಪ್ರಜೆಯ ಅರ್ಜಿಯನ್ನು ವಜಾಗೊಳಿಸಿ ದೇಶ ತೊರೆಯುವಂತೆ ಆದೇಶಿಸಿದೆ.

