ದೇಶ ಉಳಿದರೆ ಧರ್ಮ ಉಳಿಯುತ್ತದೆ: ಒಡಿಯೂರು ಶ್ರೀ
ಬಂಟ್ವಾಳ: ನೆಲ, ಜಲ, ಮೂಲ ಸಂಸ್ಕೃತಿಯನ್ನು ಉಳಿಸದಿದ್ದರೆ ನಮ್ಮ ನೆಲೆ ಉಳಿಯಲು ಸಾಧ್ಯವಿಲ್ಲ. ದೇಶ ಉಳಿದರೆ ಧರ್ಮ ಉಳಿಯುತ್ತದೆ. ಆ ನಿಟ್ಟಿನಲ್ಲಿ ಉಗ್ರರ ನಿರ್ಮೂಲನದ ಮೂಲಕ ಭವ್ಯ ಭಾರತಕ್ಕೆ ಗಟ್ಟಿ ಹೆಜ್ಜೆ ಇಡಲಾಗಿದೆ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಪುದು ಗ್ರಾಮದ ಸುಜೀರು ದೈಯಡ್ಕದಲ್ಲಿ ಶ್ರೀ ರಕ್ತೇಶ್ವರಿ ಸಪರಿವಾರ ದೈವಗಳ ಸಾನಿಧ್ಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ತುಳುನಾಡು ಧರ್ಮದ ಬೀಡು. ಧರ್ಮ ಕಾರ್ಯದ ಮೂಲಕ ದೈಯಡ್ಕ ಧರ್ಮಡ್ಕ ಆಗಿದೆ ಎಂದರು.

ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಗವಂತನ ಆರಾಧನೆಯಿಂದಿಗೆ ಧರ್ಮದ ಹಾದಿಯಲ್ಲಿ ಸಾಗಲು ಸಾಧ್ಯವಿದೆ. ಭಗವಂತನ ಬಿಂಬದ ಮುಂದೆ ಅವನ ಪ್ರತಿಬಿಂಬವಾಗಿರುವ ನಾವು ಅವನಂತಾಗಲು ಪ್ರಯತ್ನಿಸಿದಾಗ ಬದುಕು ಹಸನಾಗಲು ಸಾಧ್ಯವಿದೆ. ಇದನ್ನೇ ನಮ್ಮೆಲ್ಲಾ ಧರ್ಮಗ್ರಂಥಗಳು ತಿಳಿಸಿ ಕೊಟ್ಟಿವೆ ಎಂದರು.

ಕಾರ್ಯಕ್ರಮದಲ್ಲಿರಾಜ್ಯ ಸಹಕಾರ ರತ್ನ ಪ್ರಶಸ್ತಿ ವಿಜೇತ ರವೀಂದ್ರ ಕಂಬಳಿ ಅವರನ್ನು ಗೌರವಿಸಲಾಯಿತು.
ರಾಮಕೃಷ್ಣ ಚೌಟ ಸುಜೀರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷಿ ಅನಿಲ್ ಪಂಡಿತ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ವೀರ ಹನುಮಾನ್ ಮಂದಿರದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ನೈಜೀರಿಯದ ಉದ್ಯಮಿ ಅಜಿತ್ ಚೌಟ ದೇವಸ್ಯ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಪುದು ಗ್ರಾ.ಪಂ. ಸದಸ್ಯ ವಿಶು ಕುಮಾರ್ ವೇದಿಕೆಯಲ್ಲಿದ್ದರು.

ಅಶೋಕ್ ಶೆಟ್ಟಿ ಸುಜೀರು ಗುತ್ತು ಸ್ವಾಗತಿಸಿದರು, ರವೀಂದ್ರ ಕಂಬಳಿ ಸುಜೀರು ಬೀಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಶೋರ್ ಸುಜೀರು ವಂದಿಸಿದರು. ದೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


