ಬಂಟ್ವಾಳ: ಮಗುವಿನ ಟಿಕೆಟ್ ವಿಚಾರದಲ್ಲಿ ನಿರ್ವಾಹಕ ಹಾಗೂ ಮಗುವಿನ ಪೋಷಕರ ಮಧ್ಯೆ ವಾಗ್ವಾದ ನಡೆದ ಪರಿಣಾಮ ನಿರ್ವಾಹಕ ಟಿಕೆಟ್ ಯಂತ್ರದಲ್ಲೇ ಮಹಿಳೆ ಮೇಲೆ ಹ*ಲ್ಲೆ ನಡೆಸಿದ ಘಟನೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಏ.24ರ ರಾತ್ರಿ ನಡೆದಿದೆ.
ಮಗುವಿಗೆ ಅರ್ಧ ಟಿಕೆಟ್ ತೆಗೆಯುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಬಳಿಕ ನಿರ್ವಾಹಕ ಟಿಕೆಟ್ ಯಂತ್ರದಲ್ಲಿ ಮಹಿಳೆಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯು ಪೊಲೀಸರಿಗೆ ದೂರು ನೀಡುತ್ತೇನೆ ಬಸ್ಸನ್ನು ನಿಲ್ಲಿಸುವಂತೆ ಚಾಲಕನ ಬಳಿ ಕೇಳಿಕೊಂಡಿದ್ದು ಆದರೆ ಚಾಲಕ ಬಸ್ಸನ್ನು ನಿಲ್ಲಿಸದೇ ಚಲಾಯಿಸಿದ್ದಾರೆ. ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದರು.
ಬಿ.ಸಿ.ರೋಡು ನಿಲ್ದಾಣಕ್ಕೆ ಬಂದ ಬಂಟ್ವಾಳ ನಗರ ಠಾಣಾ ಪಿಎಸ್ಐ ರಾಮಕೃಷ್ಣ ಹಾಗೂ ಸಿಬಂದಿ ಬಸ್ಸನ್ನು ನಿಲ್ಲಿಸಿ ವಿಚಾರಣೆ ನಡೆಸಿ ಬಳಿಕ ಬಸ್ಸನ್ನು ಕಳುಹಿಸಿಕೊಟ್ಟಿದ್ದಾರೆ.



