ಜಮ್ಮು ಕಾಶ್ಮೀರ: ಮಿನಿ ಸ್ವಿಟ್ಜರ್ ಲ್ಯಾಂಡ್ ಖ್ಯಾತಿಯ ಜಮ್ಮು ಕಾಶ್ಮೀರದ ಪಹಲ್ಲಾಮ್ನಲ್ಲಿ ಮಂಗಳವಾರದಂದು ಉಗ್ರರು ದಾಳಿ ನಡೆಸಿ ವಿದೇಶಿಗರು ಸೇರಿ 26 ಜನ ಪ್ರವಾಸಿಗರನ್ನು ಹತ್ಯೆ ಮಾಡಿದ್ದಾರೆ.
ಈ ವೇಳೆ ದಾಳಿಕೋರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಬೆನ್ನಟ್ಟಿದ್ದ ಭಾರತೀಯ ಸೇನಾ ಪಡೆಯು ಬಾರಾಮುಲ್ಲಾದಲ್ಲಿ ಗಡಿ ನುಸುಳಿ ಬಂದಿದ್ದ ಇಬ್ಬರು ಉಗ್ರರನ್ನು ಬಲಿ ಪಡೆದುಕೊಂಡಿದೆ. ಮೊದಲು ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆಯ ವೇಳೆ ಪಾಕಿಸ್ತಾನ ಗಡಿಯಿಂದ ಒಳನುಸುಳಿ ಬರುತ್ತಿದ್ದ ಭಯೋತ್ಪಾದಕರು ಹಾಗು ಭದ್ರತಾ ಸಿಬ್ಬಂದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ.
ಪರಿಣಾಮ ದಾಳಿಯಲ್ಲಿ ಸೇನೆಯ ಗುಂಡಿಗೆ ಇಬ್ಬರು ಉಗ್ರರರು ಬಲಿಯಾಗಿದ್ದಾರೆ. ಬಳಿಕ ಅವರ ಬಳಿ ದೊಡ್ಡ ಪ್ರಮಾಣದಲ್ಲಿ ಇದ್ದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇನ್ನಿತರ ಸ್ಫೋಟಕ ಸಾಮಗ್ರಿಗಳನ್ನು ಸೇನೆ ವಶಪಡಿಸಿಕೊಂಡಿದೆ. ಈ ಮೂಲಕ ಭಯೋತ್ಪಾದಕರ ಒಳನುಸುಳುವಿಕೆಯನ್ನು ಸೇನಾ ಪಡೆಯು ತಡೆಯುವಲ್ಲಿ ಯಶಸ್ವಿಯಾಗಿದೆ.
ನಿನ್ನೆ ಪಹಲ್ಲಾಮ್ ಪಟ್ಟಣದ ಹುಲ್ಲುಗಾವಲು ಪ್ರದೇಶದಲ್ಲಿ ಭಯೋತ್ಪಾದಕರು ಕಂಡ ಕಂಡ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇದರಲ್ಲಿ ಇಬ್ಬರು ಕನ್ನಡಿಗರು, ನೌಕಾಪಡೆ, ಗುಪ್ತಚರ ದಳ ಅಧಿಕಾರಿ ಸಾವನ್ನಪ್ಪಿದ್ದಾರೆ. 2019 ರಲ್ಲಿ ಪುಲ್ವಾಮಾ ದಾಳಿಯ ನಂತರದ ಜಮ್ಮು ಕಾಶ್ಮೀರದ ಪಹಲ್ಲಾಮ್ನಲ್ಲಿ ನಡೆದ ಉಗ್ರರ ದಾಳಿ ಅತ್ಯಂತ ಭೀಕರ ದಾಳಿಯಾಗಿದೆ.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.




