ಮಂಗಳೂರು : ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಇಂದು ಪ್ರತಿಭಟನೆ ಆಯೋಜಿಸಿದ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಪೊಲೀಸ್ ಸರ್ಪಗಾವಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಡ್ಯಾರ್ ಷಾ ಮೈದಾನದಲ್ಲಿ ಈ ಪ್ರತಿಭಟನಾ ಸಭೆ ನಡೆಯಲಿದ್ದು ಭಾರೀ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎರಡು ಸಾವಿರಕ್ಕೂ ಅಧಿಕ ಪೊಲೀಸರನ್ನು ನಗರದ ಅಲ್ಲಲ್ಲಿ ನಿಯೋಜನೆ ಮಾಡಲಾಗಿದೆ.

ಐವರು ಎಸ್ಪಿಗಳು ಮತ್ತು ಅಡಿಷನಲ್ ಎಸ್ಪಿಗಳು, 20 ಡಿವೈಎಸ್ ಪಿ, ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗಳು ನೇತೃತ್ವ ನೀಡಲಿದ್ದಾರೆ. ಇದಲ್ಲದೆ, 20 ಕೆಎಸ್ ಆರ್ ಪಿ ತುಕಡಿ, 20 ಸಶಸ್ತ್ರ ಪೊಲೀಸ್ ಪಡೆಯನ್ನೂ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆ ನಡೆಯುವ ಸ್ಥಳ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಭದ್ರತೆ ಕಲ್ಪಿಸಲಾಗಿದೆ.

ಇನ್ನು ಈ ಕುರಿತಂತೆ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಪ್ರತಿಭಟನಾ ಸಭೆ ಮತ್ತು ಆವರಣದಲ್ಲಿ ಇಡೀ ದಿನದ ಪ್ರತಿ ಚಲನವಲನಗಳನ್ನ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುತ್ತೇವೆ. ಪ್ರತಿಭಟನಾ ಸಭೆ ಆಯೋಜಕರಿಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ.

ಈ ಬಗ್ಗೆ ಆಯೋಜಕರಿಂದ ಮುಚ್ಚಳಿಕೆ ಬರೆಸಿ ನಿಗದಿತ ಮೊತ್ತದ ಬಾಂಡ್ ಪಡೆಯಲಾಗಿದೆ. ಅಲ್ಲದೆ, ಹೆದ್ದಾರಿಯಲ್ಲಿ ಯಾವುದೇ ಸಂಚಾರ ನಿರ್ಬಂಧ ಮಾಡಿಲ್ಲ. ಮುನ್ನಚ್ಚೆರಿಕಾ ಕ್ರಮವಾಗಿ ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.



