ಬಂಟ್ವಾಳ: ಬಿ.ಸಿ.ರೋಡ್ ಬಸ್ ನಿಲ್ದಾಣದ ಪುರಸಭೆ ಸಂಕೀರ್ಣದ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬದಿಯ ಬಸ್ ತಂಗುದಾಣದ ಬಳಿ ಕುಡಿಯುವ ನೀರಿನ ಕೊಳವೆ ಒಡೆದು ಕಳೆದ ಒಂದು ತಿಂಗಳಿನಿಂದ ದಿನಕ್ಕೆ ಎರಡು ಬಾರಿ ನೀರು ಹರಿದು ಚರಂಡಿ ಸೇರುತ್ತಿದ್ದು, ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗುತ್ತಿದೆ.

ಇದರೊಂದಿಗೆ ಬಸ್ ನಿಲ್ದಾಣದ ಹಿಂಭಾಗದ ರಸ್ತೆಯ ಮಧ್ಯಭಾಗದಲ್ಲೂ ಕಳೆದ ಎರಡು ತಿಂಗಳಿನಿಂದ ಕೊಳವೆ ಸೋರಿಕೆಯಾಗುತ್ತಿದ್ದು, ಅಲ್ಲಿಯೂ ನೀರು ನಿರಂತರವಾಗಿ ಚರಂಡಿ ಪಾಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಹಿಂದೆ ಪುರಸಭೆ ಸಿಬ್ಬಂದಿ ತಾತ್ಕಾಲಿಕವಾಗಿ ದುರಸ್ತಿ ನಡೆಸಿದರೂ, ಸಮಸ್ಯೆ ಮತ್ತೆ ಮರುಕಳಿಸಿದೆ. ವಿಷಯವನ್ನು ಪುರಸಭೆ ಹಾಗೂ ಮಾಜಿ ಪುರಸಭಾ ಸದಸ್ಯರ ಗಮನಕ್ಕೂ ತಂದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಹೀಗಾಗಿ ಅಮೂಲ್ಯ ಕುಡಿಯುವ ನೀರು ವ್ಯರ್ಥವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಶಾಶ್ವತ ದುರಸ್ತಿ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



