ಸಿದ್ಧಕಟ್ಟೆ: ಕಾರ್ಗಿಲ್ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಯೋಧ ನಿವೃತ್ತ ಸೇನಾನಿ, ಹವಾಲ್ದಾರ್ ಲ್ಯಾನ್ಸಿ ಮೆಂಡಿಸ್ ತಾಕೋಡೆ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

1992ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ಲ್ಯಾನ್ಸಿ ಮೆಂಡಿಸ್ ಅವರು ನಿರಂತರ 17 ವರ್ಷಗಳ ಕಾಲ ದೇಶದ ಗಡಿಯನ್ನು ಕಾಯುವ ಮೂಲಕ ಸೇವೆ ಸಲ್ಲಿಸಿದ್ದಾರೆ. ಪಂಜಾಬ್, ಕಾಶ್ಮೀರ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಅವರು, ದೇಹಕ್ಕೆ ಐದು ಗುಂಡುಗಳು ತಗುಲಿದ್ದರೂ ಧೈರ್ಯದಿಂದ ಹೋರಾಡಿದ ಕೆಚ್ಚೆದೆಯ ಯೋಧರಾಗಿದ್ದಾರೆ. 2009ರಲ್ಲಿ ಸೇನಾ ಸೇವೆಯಿಂದ ನಿವೃತ್ತರಾದ ಬಳಿಕ ಪ್ರಸ್ತುತ ಯೂನಿಯನ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಿದ್ಧಕಟ್ಟೆ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಲ್ಯಾನ್ಸಿ ಮೆಂಡಿಸ್ ಅವರ ದೇಶ ಸೇವೆಯನ್ನು ಸ್ಮರಿಸಿ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ವತಿಯಿಂದ ಗೌರವಿಸಲಾಯಿತು.

“ಲ್ಯಾನ್ಸಿ ಮೆಂಡಿಸ್ – ನಮ್ಮ ಹೆಮ್ಮೆ” ಎಂದು ರೋಟರಿ ಕ್ಲಬ್ ಸದಸ್ಯರು ಗೌರವ ವ್ಯಕ್ತಪಡಿಸಿದರು.



