ಬಂಟ್ವಾಳ: ಶ್ರೀ ರುದ್ರ ಪಠಣ ಸಮಿತಿ, ಬಂಟ್ವಾಳದ ಆಶ್ರಯದಲ್ಲಿ ಪ್ರತಿ ತಿಂಗಳ ಶುದ್ಧ ತ್ರಯೋದಶಿ ಪ್ರದೋಷ ಪುಣ್ಯಕಾಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಸಾಮೂಹಿಕ ಶತರುದ್ರ ಪಾರಾಯಣವು ಈ ಬಾರಿ ಬಂಟ್ವಾಳದ ಮೈಯರಬೈಲಿನ ಶ್ರೀ ಜಯರಾಮ ಮೈಯ್ಯರ ನಿವಾಸದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಲಘುನ್ಯಾಸ, ನಮಕ–ಚಮಕ ಪಾರಾಯಣದೊಂದಿಗೆ ಗಣಪತಿ ಸೂಕ್ತ, ದುರ್ಗಾ ಸೂಕ್ತ, ರುದ್ರ ಸೂಕ್ತ, ದೇವಿ ಸೂಕ್ತ, ಸೌರ ಸೂಕ್ತ ಹಾಗೂ ಮಂತ್ರಪುಷ್ಪ ಪಠಣಗಳು ವಿಧಿವತ್ತಾಗಿ ನಡೆದವು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರು ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕ ಎರವಿಶಂಕರ ಮಯ್ಯ ಅವರ ನೇತೃತ್ವದಲ್ಲಿ ಶಾಂತರಾಮ ಎಸ್.ಬಿ., ಎನ್. ರಾಮಚಂದ್ರ ಮಯ್ಯ, ಮಕ್ಕೆರು ಶ್ರೀನಿವಾಸ ಹೊಳ್ಳ, ಅನಂತ ಪದ್ಮನಾಭ ರಾವ್, ಕೆ. ರಾಜಾರಾಮ ಐತಾಳ್, ಅರ್ಬಿ ಕೃಷ್ಣ ಸೋಮಯಾಜಿ, ಅಶ್ವಿನಿ ಭಟ್, ರವಿಶಂಕರ ಕಾರಂತ್, ಚಂದ್ರಮೋಹನ ರಾವ್, ಸುಮಂತ ಭಟ್ ಪಳನೀರು, ವೇಣುಗೋಪಾಲ ಹೊಳ್ಳ, ನವೀನ್ ರಾವ್, ಸುಧಾಕರ ತುಂಗ, ಗಣೇಶ ಕಾರಂತ್, ಶಾಂತಕುಮಾರ ಮಯ್ಯ, ನಾರಾಯಣ ಮಯ್ಯ (ಭಂಡಾರಿ ಬೆಟ್ಟು), ಪ್ರಶಾಂತ್ ಮಯ್ಯ ಎಂ. ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಪಾರಾಯಣದಲ್ಲಿ ಪಾಲ್ಗೊಂಡರು.

ಲೋಕಕ್ಷೇಮ, ಧರ್ಮ ಸಂರಕ್ಷಣೆ ಹಾಗೂ ಸಮಾಜದ ಶಾಂತಿ-ಸಮೃದ್ಧಿಗಾಗಿ ಆಯೋಜಿಸಲಾದ ಈ ಸಾಮೂಹಿಕ ಶತರುದ್ರ ಪಾರಾಯಣವು ಭಕ್ತಿಪೂರ್ವಕ ವಾತಾವರಣದಲ್ಲಿ ಯಶಸ್ವಿಯಾಗಿ ಸಂಪನ್ನವಾಯಿತು.


