ವಿಟ್ಲ: ಅನುದಾನಿತ ಹಿರಿಯ ಪಾಥಮಿಕ ಶಾಲೆ ಪೆರುವಾಯಿಯ ಶಾಲಾ ವಾರ್ಷಿಕೋತ್ಸವ ಮತ್ತು ಮುಖ್ಯ ಶಿಕ್ಷಕ ಕುಂಞ ನಾಯ್ಕ್ ಅವರ ಬೀಳ್ಕೊಡುಗೆಸಮಾರಂಭ ನಡೆಯಿತು.
ಕುಂಞ ನಾಯ್ಕ್ ಅವರ ಗುರುಗಳೂ, ನಿವೃತ್ತಮುಖ್ಯ ಶಿಕ್ಷಕ ಎಂ. ತಿರುಮಲೇಶ್ವರ ಭಟ್ ಅವರು ಸಮಾರಂಭ ಉದ್ಘಾಟಿಸಿ, ಮಾತನಾಡಿ ಅವರು ಒಬ್ಬ ವ್ಯಕ್ತಿಯು ಸರಿದಾರಿಯಲ್ಲಿ ನಡೆದರೆ ಶ್ರೇಷ್ಠ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಮಾಡಿರುವ ಕಾರ್ಯ ಸದಾ ಶ್ಲಾಘನೀಯವಾಗಿರುತ್ತದೆ ಎಂದು ಹೇಳಿದರು.
ಮಕ್ಕಳಿಂದ ರಚಿಸಲ್ಪಟ್ಟ ಚಿಗುರು ಪತ್ರಿಕೆಯನ್ನು ರಾಜ್ಯ ಪಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಬಂಟ್ವಾಳ ತಾಲೂಕು ಮಕ್ಕಳಸಾಹಿತ್ಯ ಲೋಕದ ಅಧ್ಯಕ್ಷ ರಮೇಶ್ ಎಂ. ಬಾಯಾರ್ ಬಿಡುಗಡೆಗೊಳಿಸಿದರು. ಶಾಲಾ ಸಂಚಾಲಕರಾದ ಸಚಿನ್ ಅಡ್ವಾಯಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ಶಾಲಾ ವಿದ್ಯಾರ್ಥಿಗಳು, ಶಾಲಾಡಳಿತ ಮಂಡಳಿ ಮತ್ತು ಶಾಲಾ ಎಸ್.ಡಿ.ಎಮ್.ಸಿ. ವತಿಯಿಂದ ಮುಖ್ಯ ಶಿಕ್ಷಕ ಕುಂಞ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರಿಗೆ ಬಂಗಾರದ ಉಡುಗೊರೆ ನೀಡಿ ಸನ್ಮಾನಿಸಲಾಯಿತು.ವ್ಯವಸಾಯ ಸೇವಾ ಸಹಕಾರಿ ಸಂಘ ಪೆರುವಾಯಿ ಇದರ ವತಿಯಿಂದ ಗೌರವಾರ್ಪಣೆ ನಡೆಯಿತು.
ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಪುಷ್ಪ, ನರಸಿಂಹ ಭಟ್, ನಿವೃತ್ತ ಶಿಕ್ಷಕರಾದ ರಾಮಯ್ಯ ಶೆಟ್ಟಿ, ಜಯರಾಮ ರೈ, ವಿಷ್ಣು ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸ ಕಡೆಂಬಿಲ, ಉಪಾಧ್ಯಕ್ಷರಾದ ಲಲಿತ ಆಚಾರ್ಯ, ಎಸ್ ಡಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಆಡಳಿತ ಮಂಡಳಿ ಸದಸ್ಯ ರಾಜೇಂದ್ರ ನಾಥ್ ರೈ, ಕೃಷ್ಣ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಡುಗೆ ಸಿಬ್ಬಂದಿಯಾಗಿ ನಿವೃತ್ತಿಯಾದ ಗೀತಾ ಅವರನ್ನು ಗೌರವಿಸಲಾಯಿತು. ಶಿಕ್ಷಕ ವೃಂದದವರನ್ನು ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ವರದಿ ವಾಚಿಸಿದರು. ಗೌರವ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ವರ್ಷಿತ, ಉಷಾ, ಮಾಲತಿ ಬಹುಮಾನ ಪಟ್ಟಿ ವಾಚಿಸಿದರು. ಶಿಕ್ಷಕ ಪ್ರಭಾಕರ್ ಎಂ. ವಂದಿಸಿದರು.



