ಮೈಸೂರು: ಬಿಇಎಂಎಲ್ ಸಂಸ್ಥೆಯ ಹಿರಿಯ ಉದ್ಯೋಗಿ ಹಾಗೂ ಎಸ್ಸಿ/ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಸದಸ್ಯರಾದ ಶ್ರೀ ರಾಮು ಜೆ ಅವರು 1986 ರಿಂದ 2026ರವರೆಗೆ ಸುಮಾರು 37 ವರ್ಷಗಳ ಕಾಲ ಸಮರ್ಪಣೆ, ಶ್ರದ್ಧೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿ ಸೇವಾನಿವೃತ್ತಿ ಹೊಂದಿದರು.

ವೃತ್ತಿಜೀವನದ ಆರಂಭದಿಂದಲೇ ಬಿಇಎಂಎಲ್ ಎಸ್ಸಿ/ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅವರು, ನೌಕರರ ಕಲ್ಯಾಣಕ್ಕಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸೇವಾನಿವೃತ್ತಿಯ ಅಂಗವಾಗಿ ಬಿಇಎಂಎಲ್ ಸಂಸ್ಥೆಯ ಮುಖ್ಯದ್ವಾರದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ವಾದ್ಯಗೋಷ್ಠಿಯೊಂದಿಗೆ ಭವ್ಯ ಮೆರವಣಿಗೆ ನಡೆಸಿ ಮಾಲಾರ್ಪಣೆ ಸಲ್ಲಿಸಲಾಯಿತು. ಜೈ ಭೀಮ್ ಹಾಗೂ ಅಂಬೇಡ್ಕರ್ ಜಯಘೋಷಗಳ ನಡುವೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ಸಿ/ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ಮಾದೇವ್ ಎಂ.ವಿ., ಪದಾಧಿಕಾರಿಗಳಾದ ಲೋಕೇಶ್ ಪಿ., ಮಹಾದೇವಸ್ವಾಮಿ, ಮಂಜುನಾಥ್, ರವಿಕುಮಾರ್, ಬಿಇಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀ ದಿವಾಕರ್, ಖಜಾಂಚಿ ವಸಂತ್ ಕೆ., ಬೆಮೊಗ್ನ ಶ್ರೀ ಮಾದೇಗೌಡ, ಮಾಜಿ ಪದಾಧಿಕಾರಿಗಳಾದ ಎಂ.ಡಿ. ರಾಜಶೇಖರ್ ಮೂರ್ತಿ, ಬಾಲಕೃಷ್ಣ, ಶಿವಯ್ಯ, ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ಮಂಜು, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು, ಸಹೋದ್ಯೋಗಿಗಳು, ಬಂಧು-ಬಳಗ ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ರಾಮು ಜೆ ಅವರ ಸುದೀರ್ಘ ಸೇವೆ, ಸಂಘಟನಾ ಕಾರ್ಯ ಹಾಗೂ ಸಾಮಾಜಿಕ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಲಾಯಿತು. ನಿವೃತ್ತಿ ಜೀವನವು ಆರೋಗ್ಯ, ನೆಮ್ಮದಿ, ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲೆಂದು ಎಲ್ಲರೂ ಶುಭ ಹಾರೈಸಿದರು.


