ಮಂಗಳೂರು: ಪಚ್ಚನಾಡಿಯ ಬಂದಲೆ ಪ್ರದೇಶದಲ್ಲಿ ರವಿವಾರ ತೆರೆದ ಬಾವಿಗೆ ಬಿದ್ದ ದನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಫ್ರ್ಯಾಂಕ್ಲಿನ್ ಫೆರ್ನಾಂಡಿಸ್ ಅವರಿಗೆ ಸೇರಿದ ದನ ರವಿವಾರ ಸಂಜೆ ವೇಳೆ ಬಾವಿ ಸಮೀಪದಲ್ಲಿ ಮೇಯುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಸುಮಾರು 25 ಅಡಿ ಆಳವಿರುವ ಬಾವಿಯಲ್ಲಿ ನೀರೂ ಇದ್ದುದರಿಂದ ಪರಿಸ್ಥಿತಿ ಆತಂಕಕಾರಿ ಆಗಿತ್ತು.

ಮನೆ ಸಮೀಪದಲ್ಲೇ ಘಟನೆ ನಡೆದ ಕಾರಣ ದನ ಬಾವಿಗೆ ಬಿದ್ದಿರುವುದು ಮನೆಯವರ ಗಮನಕ್ಕೆ ಬಂದಿದೆ. ತಕ್ಷಣ ಕದ್ರಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ದನವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿಗಳಾದ ರಮೇಶ್ ದಯಾಕರ್, ಪ್ರಮುಖ ಅಗ್ನಿಶಾಮಕ ಚಂದ್ರಹಾಸ್ ಸಾಲ್ಯಾನ್, ಚಾಲಕ ಸುರೇಶ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಮಹೇಶ್ ಮತ್ತು ರುಸ್ತುಂ ಪಾಶಾ ಭಾಗವಹಿಸಿದ್ದರು.


