ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಅನ್ನು ಆಹಾರವೆಂದು ಭಾವಿಸಿ ಕಚ್ಚಿದ ಸಾಕುನಾಯಿ, ಭೀಕರ ಸ್ಫೋಟಕ್ಕೆ ಬಲಿಯಾಗಿದೆ.

ರುದ್ರೇಶ್ ಅವರು ದನ ಮೇಯಿಸಲು ಜಮೀನಿಗೆ ತೆರಳಿದ್ದ ವೇಳೆ, ಅವರೊಂದಿಗೆ ಹೋದ ನಾಯಿ ರಸ್ತೆಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ನ್ನು ಕಚ್ಚಿದೆ. ಕೂಡಲೇ ಭಾರೀ ಸ್ಫೋಟ ಸಂಭವಿಸಿ, ನಾಯಿಯ ಮುಖ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ.

ಸ್ಫೋಟದ ಶಬ್ದ ಸುಮಾರು 1 ಕಿ.ಮೀ ವ್ಯಾಪ್ತಿವರೆಗೆ ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕಾಡು ಹಂದಿಗಳ ನಿಯಂತ್ರಣಕ್ಕಾಗಿ ಇಡುವ ಸಿಡಿಮದ್ದಿನಂತಿರುವ ವಸ್ತು ಇದಾಗಿರಬಹುದು ಎನ್ನಲಾಗಿದೆ.

ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಫೋಟಗೊಂಡ ವಸ್ತುವಿನ ಅವಶೇಷಗಳನ್ನು ಪರಿಶೀಲಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಸ್ಫೋಟದ ನಿಖರ ಕಾರಣ ತಿಳಿಯಲಿದೆ.

