ಬಜಪೆ: ಚಿರತೆಯೊಂದು ಹಾಡಹಗಲೇ ಮನೆ ಮುಂದೆ ಇದ್ದ ಹುಂಜದ ಮೇಲೆ ದಾಳಿ ನಡೆಸಿದ ಘಟನೆ ಮಂಗಳೂರು ನಗರದ ಹೊರವಲಯದ ಬಜಪೆ ಕುಪ್ಪೆಪದವು ಸಮೀಪದ ಬಾರ್ದಿಲ ಮಸೀದಿ ಬಳಿ ಜೂನ್ 3 ರಂದು ಬೆಳಕಿಗೆ ಬಂದಿದೆ.

ಅಬ್ದುಲ್ ಖಾದರ್ ಅವರ ಪುತ್ರ ಮೊಹಮ್ಮದ್ ರಿಹಾನ್ ಬೆಳಿಗ್ಗೆ ಸುಮಾರು 9 ಗಂಟೆಗೆ ಮನೆಯ ಮುಂದೆ ಕೋಳಿಗಳಿಗೆ ಆಹಾರ ಹಾಕುತ್ತಿದ್ದ ವೇಳೆ, ಸಮೀಪದ ಮರದ ಹಿಂದೆ ಅಡಗಿ ಕುಳಿತಿದ್ದ ಚಿರತೆ ಏಕಾಏಕಿ ದಾಳಿ ಮಾಡಿ ಹುಂಜವನ್ನು ಕಚ್ಚಿಕೊಂಡು ಪೊದೆಗಳತ್ತ ಪರಾರಿಯಾಗಿದೆ.

ಚಿರತೆಯನ್ನು ಕಂಡ ರಿಹಾನ್ ತಕ್ಷಣ ಮನೆಯೊಳಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದು, ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.


