ಬಂಟ್ವಾಳ: ಬಾವಿಯ ಹೂಳೆತ್ತುವ ಕೆಲಸ ಮುಗಿಸಿ ಮೇಲಕ್ಕೆ ಬರುತ್ತಿದ್ದ ವೇಳೆ ಹಗ್ಗ ಕಡಿದು ಇಬ್ಬರು ಕಾರ್ಮಿಕರು ಬಾವಿಗೆ ಬಿದ್ದ ಘಟನೆ ಮೇ 17ರ ಸಂಜೆ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ.

ಕುಕ್ಕಾಜೆ ನಿವಾಸಿ ಕೇಶವ ಪೂಜಾರಿ ಅವರ ಮನೆಯ ಸುಮಾರು 40 ಅಡಿ ಆಳದ ಬಾವಿಯಲ್ಲಿ ಹೂಳೆತ್ತುವ ಕೆಲಸಕ್ಕೆ ಬಂದಿದ್ದ ಬರಿಮಾರು ಮೂಲದ ಪದ್ಮನಾಭ ಹಾಗೂ ರಾಮ್ ಅಪಘಾತಕ್ಕೀಡಾದ ಕಾರ್ಮಿಕರು.


ಹೂಳೆತ್ತುವ ಕಾರ್ಯ ಮುಗಿಸಿ ಹಗ್ಗದ ಸಹಾಯದಿಂದ ಮೇಲಕ್ಕೆ ಬರುತ್ತಿದ್ದಾಗ ಮಧ್ಯ ಭಾಗಕ್ಕೆ ತಲುಪಿದ ವೇಳೆ ಹಗ್ಗ ಏಕಾಏಕಿ ಕಡಿದು ಇಬ್ಬರೂ ಬಾವಿಯೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಓರ್ವ ಕಾರ್ಮಿಕನ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೋರ್ವ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.



