ಹೊನ್ನಾವರ: ಯಕ್ಷಗಾನ ರಂಗದ ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರು ಬುಧವಾರ ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಯಿಂದ ಬಡಗುತಿಟ್ಟು ಯಕ್ಷಗಾನ ಕ್ಷೇತ್ರವು ಅಪಾರ ನಷ್ಟ ಅನುಭವಿಸಿದೆ.

1947ರಲ್ಲಿ ಹಡಿನಬಾಳನಲ್ಲಿ ಜನಿಸಿದ ಸುಬ್ರಾಯ ಹೆಗಡೆ ಅವರು ಯಕ್ಷಗಾನದ ಪರಂಪರೆಯ ಕುಟುಂಬದಲ್ಲಿ ಬೆಳೆದವರು. ಹಿರಿಯ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು, ಕೆರೆಮನೆ ಮಹಾಬಲ ಹೆಗಡೆ ಹಾಗೂ ಗಣಪತಿ ಹೆಗಡೆ ಅವರ ಬಳಿ ತರಬೇತಿ ಪಡೆದಿದ್ದರು.

ಭಾಗವತ, ವೇಷಧಾರಿ ಹಾಗೂ ವಾದಕರಾಗಿ ಸಮಾನವಾಗಿ ಪರಿಣತಿ ಹೊಂದಿದ್ದ ಅವರು “ಲಯ ಬ್ರಹ್ಮ” ಎಂಬ ಬಿರುದಿಗೂ ಪಾತ್ರರಾಗಿದ್ದರು. ಸುಮಾರು 45 ವರ್ಷಗಳ ಕಾಲ ಇಡಗುಂಜಿ ಮೇಳ, ಗುಂಡಬಾಳ ಮೇಳ, ಸಾಲಿಗ್ರಾಮ ಮೇಳ, ಬಚ್ಚಗಾರು ಮೇಳ ಹಾಗೂ ಅಮೃತೇಶ್ವರಿ ಮೇಳಗಳಲ್ಲಿ ಕಲಾಸೇವೆ ಸಲ್ಲಿಸಿದ್ದರು.

ಅವರ ಕಲಾಸೇವೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಯಕ್ಷ ದೇಗುಲ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದ್ದವು.

ಅವರ ನಿಧನಕ್ಕೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಹಾಗೂ ಸಾಂಸ್ಕೃತಿಕ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.


