ಬಂಟ್ವಾಳ: ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಶ್ರೀ ರಾಮಾಂಜನೇಯ ಭಜನ ಮಂದಿರದ ವಾರ್ಷಿಕೋತ್ಸವ ಪ್ರಯುಕ್ತ ಭಜನ ಮಂಗಳೋತ್ಸವ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಎ.19ರಂದು ನಡೆಯಿತು.

ಬೆಳಗ್ಗೆ ಭಜನ ಮಂಗಳೋತ್ಸವಕ್ಕೆ ಚಾಲನೆ, ಗಣಯಾಗ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನ ಮಂಗಳ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ವಾಮದಪದವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು ಅವರು ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಯುವ ಜನತೆ ಭಜನಾ ಮಂದಿರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆಯ ಅರಿವು ಉಂಟಾಗುತ್ತದೆ. ಸಮಾಜದಲ್ಲಿ ಧರ್ಮ ಜಾಗೃತಿಯಾಗುವುದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಶ್ರೀ ರಾಮಾಂಜನೇಯ ಭಜನ ಮಂದಿರದ ಕಾರ್ಯ ಅಭಿನಂದನೀಯ ಎಂದು ಹೇಳಿದರು.

ಭಜನ ಸಂಕೀರ್ತನಕಾರ ನವೀನ್ ಶೆಟ್ಟಿ ಕಕ್ಕಿಬೆಟ್ಟು ಅವರು ಮಾತನಾಡಿ, ನಗರ ಭಜನೆ ಮಾಡುವುದರಿಂದ ಸಮಾಜಕ್ಕೆ ಒಳಿತಾಗುತ್ತದೆ. ದೇವರನ್ನು ಒಲಿಸುವ ಸುಲಭ ಮಾರ್ಗ ಭಜನೆಯಿಂದ ಸಾಧ್ಯ. ಭಜನೆಯಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ರಂಗಭೂಮಿ ಕಲಾವಿದ ರತ್ನದೇವ್ ಪುಂಜಾಲಕಟ್ಟೆ ಅವರು ಮಾತನಾಡಿ, ಶ್ರೀ ರಾಮನ ಆದರ್ಶ, ಹನುಮಂತನ ಸ್ವಾಮಿ ನಿಷ್ಠೆ, ಭಕ್ತಿ ನಮಗೆಲ್ಲ ಆದರ್ಶವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಪೂಜಾರಿ, ನಾಟಕಕಾರ, ಚಲನಚಿತ್ರ ನಿರ್ದೇಶಕ ಲ| ರಾಘವೇಂದ್ರ ಕಾರಂತ ಮೊಗರ್ನಾಡು, ಪ್ರಗತಿಪರ ಕೃಷಿಕ ಗಂಗಾಧರ ಮುಗೇರ, ಶ್ರೀ ಕ್ಷೇ. ಧ.ಗ್ರಾ.ಯೋಜನೆ ಸೇವಾ ಪ್ರತಿನಿಧಿ ಮೋಹನದಾಸ ಗಟ್ಟಿ, ಸಮಿತಿ ಗೌರವಾಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಕಾರ್ಯಾಧ್ಯಕ್ಷ ಡಾ.ರಾಮಕೃಷ್ಣ ಎಸ್. ಸನಂಗುಳಿ,ಪ್ರ.ಕಾರ್ಯದರ್ಶಿ ವಿನೋದ್ ಪೂಜಾರಿ ಹಲೆಪ್ಪಾಡಿ, ಭಜನ ಮಂಡಳಿ ಪ್ರಮುಖರಾದ ಕೀರ್ತನ್ ಕುಮಾರ್, ಸಂಧ್ಯಾ ಆರ್.ಕೋರ್ನಾಯ,ಪ್ರಶಾಂತ್ ದೇವಾಡಿಗ, ಪುನೀತ್ ಹಲೆಪ್ಪಾಡಿ, ಶಿವ ಪ್ರಸಾದ್ ಪುಣ್ಕೆದಡಿ, ದೀಪಾ, ಶ್ರೇಯಾ, ಪೂಜಾ ಡಿ.ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ನಾಟಿ ವೈದ್ಯೆ ವೆಂಕಮ್ಮ ಪೂಜಾರ್ತಿ ಕಂಗಿತ್ಲು ಹಾಗೂ ಭಜನ ಸಂಕೀರ್ತನಕಾರ ನವೀನ್ ಶೆಟ್ಟಿ ಕಕ್ಕಿಬೆಟ್ಟು ಅವರನ್ನು ಸಮ್ಮಾನಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷ ಕಿರಣ್ ಕೋಟ್ಯಾನ್ ಅವರು ಸ್ವಾಗತಿಸಿದರು. ಸತೀಶ್ ಕರ್ಕೇರಾ ಕಯ್ಯಬೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಅನ್ನ ಸಂತರ್ಪಣೆ , ಪುಂಜಾಲಕಟ್ಟೆ ತಾಂಬೂಲ ಕಲಾವಿದರಿಂದ ಎಲ್ಲೆ ದಾದ ಏರೆಗ್ ಗೊತ್ತು ತುಳು ನಾಟಕ ಪ್ರದರ್ಶನ ನಡೆಯಿತು.


