ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಭೆಯಲ್ಲಿ ನಿರ್ಧಾರ

ಬಂಟ್ವಾಳ: ‘ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಬಂಟ್ವಾಳ’ ಇದರ ಸಭೆಯು, ಸಮಿತಿಯ ಗೌರವಾಧ್ಯಕ್ಷರಾದ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಇಂದು ಬಂಟ್ವಾಳದಲ್ಲಿ ನಡೆಯಿತು.

ಸಮಿತಿಯ ಸಂಚಾಲಕರುಗಳಾದ ಬಿ ಶೇಖರ್ ಮತ್ತು ಮೋಹನ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಾಗವಹಿಸಿದ ಎಲ್ಲರನ್ನೂ ಸ್ವಾಗತಿಸಿದರು. ಟೋಲ್ ಗೇಟ್ ತೆರವಿಗಾಗಿ ಈ ಹಿಂದಿನ ಎರಡು ಹಂತಗಳಲ್ಲಿ ನಡೆದ ಕಾರ್ಯಕ್ರಮಗಳು ಬೀರಿರುವ ಪರಿಣಾಮಗಳನ್ನು ಸಭೆಯು ಚರ್ಚಿಸಿತು.

ಎಪ್ರಿಲ್ 28 ರಂದು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ ಗೇಟ್ ವರಗೆ ‘ಜನಾಂದೋಲನ ನಡಿಗೆ’ ಮೆರವಣಿಗೆ ನಡೆಸುವುದು ಎಂದು ತೀರ್ಮಾನಿಸಲಾಯಿತು.

ಬಿ ರಮಾನಾಥ ರೈ ಹಾಗು ಟೋಲ್ ಗೇಟ್ ವಿರೋಧಿ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಜನಾಂದೋಲನ ಮೆರವಣಿಗೆಯ ರೂಪುರೇಷೆಗಳ ಕುರಿತು ಸಭೆಗೆ ವಿವರಿಸಿದರು. ಸಭೆಯಲ್ಲಿ ಭಾಗಿಗಳಾಗಿದ್ದ ಹಲವು ಪ್ರಮುಖರು ತಮ್ಮ ಸಲಹೆಗಳನ್ನು ನೀಡಿದರು.

ಎ. 28 ರಂದು ಸಂಜೆ ನಾಲ್ಕು ಗಂಟೆಗೆ ಜನಾಂದೋಲನ ನಡಿಗೆಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಚಾಲನೆ ನೀಡಲಾಗುವುದು ಬಳಿಕ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಸಂಜೆ 5.30 ಕ್ಕೆ ಸಮಾರೋಪಗೊಳ್ಳಲಿದೆ.
*ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಿದ್ದತಾ ಸಭೆ ನಡೆಸುವುದು.

*ಬಂಟ್ವಾಳದ ಪ್ರಮುಖ ಪೇಟೆಗಳಲ್ಲಿ ಹೋರಾಟ ಸಮಿತಿ ವತಿಯಿಂದ ಜನರನ್ನು ನೇರವಾಗಿ ಸಂಪರ್ಕಿಸುವ ಮೂಲಕ ಪ್ರಚಾರ ನಡೆಸುವುದು.
*ತಾಲೂಕಿನ ಎಲ್ಲಾ ಜನಪರ ಸಂಘ ಸಂಸ್ಥೆಗಳು, ಸಾರಿಗೆ ಯೂನಿಯನ್ ಗಳು, ಸಾಮಾಜಿಕ ಸಂಘ ಸಂಸ್ಥೆಗಳ ಬೆಂಬಲ ಪಡೆಯುವುದು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಕೊನೆಯಲ್ಲಿ ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ದನ್ಯವಾದ ಸಲ್ಲಿಸಿದರು.


