ಮಂಗಳೂರು: ಎಂಸಿಸಿ ಬ್ಯಾಂಕ್ 2025-26 ವಿತ್ತೀಯ ವರ್ಷದಲ್ಲಿ ರೂ. 13 ಕೋಟಿ ಲಾಭ ದಾಖಲಿಸಿ ಮಂಗಳೂರಿನ ದೇರಳಕಟ್ಟೆಯಲ್ಲಿ 22ನೇ ಶಾಖೆ ಹಾಗೂ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ 23ನೇ ಶಾಖೆ ಆರಂಭಿಸಲು ಸಿದ್ಧತೆಯನ್ನು ನಡೆಸಿದೆ.


ಮುಂದಿನ ವರ್ಷಾಂತ್ಯಕ್ಕೆ ಎಂಸಿಸಿ ಬ್ಯಾಂಕ್ ಶಾಖೆಗಳ ಸಂಖ್ಯೆ 25ಕ್ಕೆ ಏರಿಸುವ ಗುರಿಯನ್ನು ಹೊಂದಿದ್ದು 31 ಮಾರ್ಚ್ 2026ಕ್ಕೆ ಅಂತ್ಯಗೊಳ್ಳುವ ಆರ್ಥಿಕ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾನದಂಡಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಈ ವರ್ಷ ತನ್ನ 114ನೇ ವರ್ಷದ ಸೇವೆಯನ್ನು ಪೂರೈಸಲಿದೆ.

ಬ್ಯಾಂಕ್ ಈ ಆರ್ಥಿಕ ವರ್ಷದಲ್ಲಿ ರೂ. 13 ಕೋಟಿ ಲಾಭವನ್ನು ದಾಖಲಿಸಿದೆ. ನಿವ್ವಳ ಎನ್ಪಿಎ (Net NPA) ಇಳಿಕೆಗೆ ನಿರಂತರ ಪ್ರಯತ್ನ ನಡೆಸಿ, ಅದನ್ನು ಒಟ್ಟು ಮುಂಗಡಗಳ 1.25% ಮಟ್ಟಕ್ಕೆ ತಗ್ಗಿಸಲು ಯಶಸ್ವಿಯಾಗಿದೆ. ಒಟ್ಟು ವ್ಯವಹಾರ ರೂ.1525 ಕೋಟಿಗೆ ತಲುಪಿದ್ದು, 23% ವೃದ್ಧಿ ಸಾಧಿಸಿದೆ. 2018ನೇ ವರ್ಷದಲ್ಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ರೂ. 500 ಕೋಟಿ ಇದ್ದ ಬ್ಯಾಂಕಿನ ಒಟ್ಟು ವ್ಯವಹಾರವು ಕಳೆದ ಏಳೂವರೆ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದು 114 ವರ್ಷದ ಇತಿಹಾಸವಿರುವ ಬ್ಯಾಂಕಿನ ಚರಿತ್ರೆಯಲ್ಲಿಯೇ ದಾಖಲೆಯಾಗಿದೆ. ಬ್ಯಾಂಕಿನ ನೆಟ್ವರ್ತ್ ರೂ.83.76 ಕೋಟಿಯಿಂದ ರೂ.91.80 ಕೋಟಿಗೆ ಏರಿಕೆಯಾಗಿದೆ. ಬ್ಯಾಂಕ್ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಠೇವಣಿಗಳು ಹಾಗೂ ಸಾಲಗಳ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಿದೆ.

ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.285 ಕೋಟಿಗಳ ಒಟ್ಟು ವ್ಯವಹಾರ ವಹಿವಾಟನ್ನು ದಾಖಲಿಸಿದ್ದು, ಇದು ಬ್ಯಾಂಕಿನ ದೃಢವಾದ ಸಾಧನೆ, ಸ್ಥಿರವಾದ ಬೆಳವಣಿಗೆ ಹಾಗೂ ಪರಿಣಾಮಕಾರಿ ವ್ಯವಹಾರ ತಂತ್ರಗಳನ್ನು ಪ್ರತಿಬಿಂಬಿಸುತ್ತದೆ. ಎನ್ಆರ್ಐ ಗ್ರಾಹಕರ ನಿರಂತರ ಬೆಂಬಲವು ಸಹ ಬ್ಯಾಂಕಿನ ಅಭಿವೃದ್ದಿಗೆ ಕಾರಣವಾಗಿದೆ. ಪ್ರಾರಂಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಎಂಬ ಕರಾವಳಿ ಜಿಲ್ಲೆಗಳಲ್ಲೇ ಸೇವೆ ನೀಡುತ್ತಿದ್ದ ಬ್ಯಾಂಕ್, ಇದೀಗ ರಾಜ್ಯದಾದ್ಯಂತ ತನ್ನಕಾರ್ಯಾಚರಣೆಯನ್ನು ವಿಸ್ತರಿಸಿದೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೈಂದೂರಿನಲ್ಲಿ 20ನೇ ಶಾಖೆ ಹಾಗೂ ಸಂತೆಕಟ್ಟೆಯಲ್ಲಿ 21ನೇ ಶಾಖೆಯನ್ನು ಆರಂಭಿಸಿದೆ. ಕುಲಶೇಖರ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸುಸಜ್ಜಿತ ಸೌಲಭ್ಯದೊಂದಿಗೆ ಸ್ಥಳಾಂತರಿಸಲಾಗಿದೆ. ಬೆಳ್ಮಣ್, ಸುರತ್ಕಲ್, ಉಡುಪಿ, ಬೆಳ್ತಂಗಡಿ, ಸಂತೆಕಟ್ಟೆ, ಕಿನ್ನಿಗೋಳಿ ಹಾಗೂ ಕುಲಶೇಖರದಲ್ಲಿ ಹೊಸ 7 ಏಟಿಎಮ್ಗಳನ್ನು ಸ್ಥಾಪಿಸಲಾಗಿದೆ. ಹೀಗೆ ಎಟಿಎಮ್ಗಳ ಸಂಖ್ಯೆ 15ಕ್ಕೆ ಏರಿದೆ.

2026-27ನೇ ವರ್ಷದಲ್ಲಿ 4 ಹೊಸ ಶಾಖೆಗಳನ್ನು ತೆರೆಯಲು ಯೋಜನೆ ಹಾಕಲಾಗಿದ್ದು, ಶಾಖೆಗಳ ಸಂಖ್ಯೆಗಳು 25ಕ್ಕೆ ಏರಲಿವೆ. ಈಗಾಗಲೇ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಮತ್ತು 23ನೇ ಶಾಖೆಯನ್ನು ಕಟಪಾಡಿಯಲ್ಲಿ ತೆರೆಯಲು ಅನುಮತಿ ಸಿಕ್ಕಿರುತ್ತದೆ. ಕರ್ನಾಟಕದಲ್ಲಿ ಎನ್ಆರ್ಐ ಸೌಲಭ್ಯವನ್ನು ಹೊಂದಿರುವ ಎರಡನೇ ನಗರ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದು, ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಸಮಾನವಾದ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ. ರಾಜ್ಯದಾದ್ಯಂತ ಶಾಖೆಗಳ ವಿಸ್ತರಣೆಯತ್ತವೂ ಗಮನ ಹರಿಸಿದೆ. 2025–26 ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.13 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿದ್ದು, ರೂ.872.88 ಕೋಟಿ ಠೇವಣಿಗಳನ್ನು ಹೊಂದಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ 23.74% ಏರಿಕೆ ಕಂಡಿದೆ. ರೂ.652.06 ಕೋಟಿ ಸಾಲ ನೀಡಿದ್ದು, 21.79% ವೃದ್ಧಿ
ಸಾಧಿಸಿದೆ. ದುಡಿಯುವ ಬಂಡವಾಳ ರೂ.1008.97 ಕೋಟಿ (21.52% ವೃದ್ಧಿ) ಮತ್ತು ಷೇರು ಬಂಡವಾಳ ರೂ.34.08 ಕೋಟಿ ಆಗಿದೆ. ಒಟ್ಟು ಎನ್ಪಿಎ ಪ್ರೊವಿಷನ್ ಕವರೆಜ್ ಅನುಪಾತ 68.87% ಆಗಿದೆ. ಬ್ಯಾಂಕಿನ ಸಿಆರ್ಎಆರ್ (CRAR) 31 ಮಾರ್ಚ್ 2026ರ ವೇಳೆಗೆ 17% ಆಗಿದ್ದು, ನಿಗದಿಪಡಿಸಿದ 12.00%
ಮಾನದಂಡಕ್ಕಿಂತ ಹೆಚ್ಚಾಗಿದೆ. 31 ಮಾರ್ಚ್ 2026ರ ವೇಳೆಗೆ ಬ್ಯಾಂಕಿನ ಒಟ್ಟು ವ್ಯವಹಾರ ರೂ.1525 ಕೋಟಿಗೆ ಏರಿಕೆಯಾಗಿದೆ.

ಮುಂದಿನ ಯೋಜನೆಗಳು:
- ಜೂನ್ ಅಂತ್ಯದೊಳಗೆ ದೇರಳಕಟ್ಟೆ (ದಕ್ಷಿಣ ಕನ್ನಡ ಜಿಲ್ಲೆ) ಯಲ್ಲಿ 22ನೇ ಶಾಖೆ ಆರಂಭ
- ಮಂಗಳೂರು (ಮೋರ್ಗನ್ಗೇಟ್) ಶಾಖೆಯನ್ನು ಜುಲೈ ಅಂತ್ಯದೊಳಗೆ ಸ್ಥಳಾಂತರ
- ಆಗಸ್ಟ್ ಮೊದಲ ವಾರದಲ್ಲಿ ಕಟಪಾಡಿ (ಉಡುಪಿ ಜಿಲ್ಲೆ) ಯಲ್ಲಿ 23ನೇ ಶಾಖೆ ಆರಂಭ
- ಕಾರ್ಕಳ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ
- ಮೂಡಬಿದ್ರೆ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ನೆಲ ಮಹಡಿಗೆ ಸ್ಥಳಾಂತರ
- ಮಾರ್ಚ್ ಅಂತ್ಯದೊಳಗೆ ವಾಮಂಜೂರಿನಲ್ಲಿ 24ನೇ ಶಾಖೆ ಆರಂಭ
- ಮಾರ್ಚ್ ಅಂತ್ಯದೊಳಗೆ ಮಂಗಳೂರಿನಲ್ಲಿ ಸಿಲ್ವರ್ ಶಾಖೆ (25ನೇ ಶಾಖೆ) ಆರಂಭ
- 3 ನಗದು ಠೇವಣಿ ಮತ್ತು ವಿತರಣೆ (Cash Deposit and Dispenser) ಎಟಿಎಂ ಯಂತ್ರಗಳ ಸ್ಥಾಪನೆ ಬ್ಯಾಂಕ್ ವಿವಿಧ ಹಣಕಾಸು ಉತ್ಪನ್ನಗಳನ್ನು ಒದಗಿಸುತ್ತಿದ್ದು, ಕಡಿಮೆ ದರದಲ್ಲಿ ಲಾಕರ್ ಸೌಲಭ್ಯ, ದೇಶೀಯ ಹಾಗೂ ವಿದೇಶಿ ಶಿಕ್ಷಣ ಸಾಲಗಳು, ಎಂಎಸ್ಎಂಇ ಸಾಲಗಳು, ವಾಹನ ಸಾಲಗಳು, ಗೃಹ ಸಾಲಗಳು, ಮನೆ ದುರಸ್ತಿ, ಮದುವೆ ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಗೆ ಸಾಲಗಳನ್ನು ನೀಡುತ್ತದೆ. ಎಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಉಚಿತವಾಗಿ ಲಭ್ಯವಿವೆ.
- ಬ್ಯಾಂಕಿನಲ್ಲಿನ ಠೇವಣಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳಂತೆ ಡಿಪಾಸಿಟ್ ಇನ್ಸುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇರ್ಷನ್ (DICGC) ಮೂಲಕ ವಿಮೆಗೊಳಿಸಲಾಗಿದೆ. ಈ ಸಾಧನೆಗೆ ಸದಸ್ಯರು ಮತ್ತು ಗ್ರಾಹಕರ ವಿಶ್ವಾಸ, ಸಿಬ್ಬಂದಿಯ ಸಮರ್ಪಿತ ಸೇವೆಯೇ ಪ್ರಮುಖ ಕಾರಣವಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿಯೂ ಇದೇ ರೀತಿಯ ಬೆಂಬಲದೊಂದಿಗೆ ಇನ್ನಷ್ಟು ಸಾಧನೆಗಳನ್ನು ಮಾಡುವತ್ತ ಬ್ಯಾಂಕ್ ನಿರೀಕ್ಷೆ ಹೊಂದಿದೆ.

ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ಅನಿಲ್ ಲೋಬೊ, ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರೂ ಡಿಸೊಜಾ, ಡಾ| ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜಾ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೊಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೊಜಾ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂದಕರು ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

ಎಪ್ರಿಲ್ 7, 2026 ನೇ ಮಂಗಳವಾರದಂದು ಮಧ್ಯಾಹ್ನ 12.00 ಗಂಟೆಗೆ, ಮಂಗಳೂರು ಹಂಪನಕಟ್ಟೆಯ ಆಡಳಿತ ಮಂಡಳಿ ಸಭಾ ಭವನ, ಎಂಸಿಸಿ ಬ್ಯಾಂಕ್ ಆಡಳಿತ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


