ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ. ೧೪ರ ವರೆಗೆ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಚಾಲನೆ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ನಾವು ಮಾಡಿದ ಸತ್ಕರ್ಮಗಳು ನಮ್ಮನ್ನು ಕಾಪಾಡುತ್ತದೆ. ಭಕ್ತಿ ಇಲ್ಲದ ಮುಕ್ತಿಗೆ ಬಲವಿಲ್ಲ. ದತ್ತ ತತ್ವ ಬಹಳಷ್ಟು ವಿಶೇಷವಾದುದು. ಗುರುದೀಕ್ಷೆಗೆ ಬದ್ಧರಾಗುವ ಸಮಯವಿದು. ಮಾಲಾಧಾರಣೆ ಸಂದರ್ಭದಲ್ಲಿ ಭಕ್ತಿ ಶ್ರದ್ಧೆ ನಮ್ಮಲ್ಲಿರಲಿ. ಇದೊಂದು ಅಂತರಂಗದ ಸಂಭ್ರಮ. ಸಮಾಜದ ಓರೆ ಕೋರೆಯನ್ಮು ತಿದ್ದುವ ಕಾರ್ಯ ಹರಿದಾಸರಿಂದ ಸಾಧ್ಯ. ಅವಧೂತನೆಂದರೆ ಅಕ್ಷರ ಬ್ರಹ್ಮ. ವೇದ ಉಪನಿಷತ್ ನ ಸಾರ ಜನರಿಗೆ ತಲುಪಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀಗಳು ಸಂಸ್ಥಾನದ ಪರಿಷ್ಕೃತ ವೆಬ್ಸೈಟ್ ಗೆ ಚಾಲನೆ ನೀಡಿದರು. ಶ್ರೀಗಳು ಭಕ್ತರಿಗೆ ಮುದ್ರಾಧಾರಣೆ ಬಳಿಕ ಮಾಲಾಧಾರಣೆ ನಡೆಸಿದರು.ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಮುಂಬೈಯ ಉದ್ಯಮಿ ವಾಮಯ್ಯ ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ, ಕಲ್ಪನಾ ಮುಂಬೈ, ಅಜಿತ್ ಕುಮಾರ್ ಪಂದಳಂ, ಪೊಳಲಿ ಜಗದೀಶ್ ದಾಸರು, ಗಿರಿಜಾ ಬಾಯಿ, ರಮೇಶ್ ಹೆಬ್ಬಾರ್, ಕೌಶಿಕ್ ಮಂಜನಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂತೋಷ್ ಭಂಡಾರಿ ಸ್ವಾಗತಿಸಿದರು. ಯಶವಂತ ವಿಟ್ಲ ವಂದಿಸಿದರು.

