Breaking
18 May 2026, Mon

ಅಕ್ರಮ ಮೀನುಗಾರಿಕೆ ತೊಡಗಿದ್ದ ತಮಿಳುನಾಡಿನ ದೋಣಿ ಢಿಕ್ಕಿ: ಓರ್ವ ಸ್ಥಳೀಯ ಮೀನುಗಾರ ನಾಪತ್ತೆ

ಉಡುಪಿ: ತಮಿಳುನಾಡು ಮೂಲದ ಮೀನುಗಾರರು ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಸ್ಥಳೀಯ ಮೀನುಗಾರರ ದೋಣಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಕಾಪು ಕಡಲ ತೀರದಲ್ಲಿ ನಡೆದಿದೆ.

ತಮಿಳುನಾಡಿನ ಬೋಟ್‌ಗಳು ಕಳೆದ ಹಲವು ದಿನಗಳಿಂದ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರೆಂಬ ಮಾಹಿತಿ ತಿಳಿದ ಸ್ಥಳೀಯ ಮೀನುಗಾರರು ಪ್ರಶ್ನಿಸಲು ಸಣ್ಣ ದೋಣಿಯಲ್ಲಿ ಸಮುದ್ರಕ್ಕೆ ತೆರಳಿದ್ದರು.

ಈ ವೇಳೆ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ತಮಿಳುನಾಡು ಮೀನುಗಾರರು ಉದ್ದೇಶಪೂರ್ವಕವಾಗಿ ಸ್ಥಳೀಯ ಮೀನುಗಾರರ ಸಣ್ಣ ದೋಣಿಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಸ್ಥಳೀಯ ಮೀನುಗಾರರ ದೋಣಿ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ಪರಿಣಾಮವಾಗಿ ಇಬ್ಬರು ಮೀನುಗಾರರು ನೀರಿಗೆ ಬಿದ್ದಿದ್ದಾರೆ. ಇವರಲ್ಲಿ ಓರ್ವರನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೀನುಗಾರ ನಾಪತ್ತೆಯಾಗಿದ್ದಾರೆ.

ಸದ್ಯ ನಾಪತ್ತೆಯಾದ ಮೀನುಗಾರನಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಘಟನೆಯ ಬಳಿಕ ತಮಿಳುನಾಡು ಮೂಲದ ಮೀನುಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *