ಗಂಗೊಳ್ಳಿ : ಮೀನುಗಾರಿಕೆ ನಡೆಸುವಾಗ ದೋಣಿಯಲ್ಲಿ ಬಿದ್ದು ಗಾಯಗೊಂಡಿದ್ದ ಮೀನುಗಾರರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.
ಮೃತರನ್ನು ಗಂಗೊಳ್ಳಿ ಗ್ರಾಮದ ಜಗನ್ನಾಥ ಖಾರ್ವಿ (43) ಎಂದು ಗುರುತಿಸಲಾಗಿದೆ.

ಜಗನ್ನಾಥ ಖಾರ್ವಿ ಅವರು ಫೆಬ್ರವರಿ 27ರ ಬೆಳಗ್ಗೆ ದಾಕುಹಿತ್ತುವಿನಿಂದ ನಾಡದೋಣಿಯಲ್ಲಿ ಇತರ ಮೀನುಗಾರರೊಂದಿಗೆ ಸಮುದ್ರಕ್ಕೆ ತೆರಳಿದ್ದರು. ಕರಾವಳಿಯಿಂದ ಸುಮಾರು ಐದು ಮೈಲು ದೂರದಲ್ಲಿ ಮೀನುಗಾರಿಕೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಜೋರಾದ ಗಾಳಿಯಿಂದ ದೋಣಿ ತೀವ್ರವಾಗಿ ಅಲುಗಾಡಿದ ಪರಿಣಾಮ ಅವರು ಸಮತೋಲನ ಕಳೆದುಕೊಂಡು ದೋಣಿಯೊಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಬಳಿಕ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







