ಬಂಟ್ವಾಳ : ತಾಲೂಕು ಕಾವಳಮೂಡೂರು ಗ್ರಾಮದ ಕಾರಿಂಜದಲ್ಲಿರುವ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವವು ಫೆ.13 ರಿಂದ ಫೆ. 19 ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ.ಅಮೀನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆ.13 ರಂದು ಸಂಜೆ ವಗ್ಗ ಕಾರಿಂಜ ಕ್ರಾಸ್ ಬಳಿಯಿಂದ ಹೊರಕಾಣಿಕೆ ಸಮರ್ಪಣೆ ಮೆರವಣಿಗೆ ಹಾಗೂ ಧ್ವಜಾರೋಹಣ ನಡೆಯಲಿದ್ದು ಫೆ. 14 ರಂದು ಬೆಳಗ್ಗೆ ಗಣಹೋಮ, ಅನ್ನ ಸಂತರ್ಪಣೆ, ನಿತ್ಯ ಉತ್ಸವಗಳು ನಡೆಯಲಿದೆ.

ಫೆ.15 ರಂದು ಸಂಜೆ ಮಹಾಶಿವರಾತ್ರಿ ಜಾಗರಣೆ, ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಉತ್ಸವ, ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ, ಭಜನೆ, ರಾತ್ರಿ ತುಲಾಭಾರ ಸೇವೆ, ರಂಗಪೂಜೆ, ಶತರುದ್ರಾಭಿಷೇಕ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ ನಡೆಯಲಿದೆ.

ಪಾರ್ವತಿ, ಪರಮೇಶ್ವರ ದೇವರ ಭೇಟಿ: ಫೆ. 16 ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ತಾಳಮದ್ದಳೆ ರಾವಣ ವಧೆ, ಯಕ್ಷವಾಸ್ಯಂ ಕಾರಿಂಜ ಇವರಿಂದ ಯಕ್ಷಗಾನ ಕುಮಾರ ವಿಜಯ ಪ್ರದರ್ಶನವಿದೆ. ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತಿ, ಪರಮೇಶ್ವರ ದೇವರ ಭೇಟಿ, ಚಂದ್ರ ಮಂಡಲ ಉತ್ಸವ ನಡೆಯಲಿದೆ.

ಮಹಾರಥೋತ್ಸವ: ಫೆ.17 ರಂದು ಬೆಳಗ್ಗೆ ಕವಾಟೋದ್ಘಾಟನೆ, ಮಹಾರಥೋತ್ಸವ, ದೈವದ ನೇಮೋತ್ಸವ, ಬಲಿಉತ್ಸವ ನಡೆಯಲಿದೆ. ಫೆ. 18 ರಂದು ರಾತ್ರಿ ಗೀತಾ ಸಾಹಿತ್ಯ ಸಂಭ್ರಮ, ಕಟ್ಟೆ ಪೂಜೆ ಉತ್ಸವ, ರಾತ್ರಿ ಕಟ್ಟೆಪೂಜೆ ಉತ್ಸವಗಳು, ದೇವರ ಶಯನ, ಕವಾಟ ಬಂಧನ ನಡೆಯಲಿದೆ.

ಫೆ.19 ರಂದು ಬೆಳಗ್ಗೆ ಕವಾಟೋದ್ಘಾಟನೆ, ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ, ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಫೆ.20ರಂದು ಬೆಳಗ್ಗೆ ಸಂಪ್ರೋಕ್ಷಣೆ, ಕಲಶ, ಮಹಾಪೂಜೆ, ಅನ್ನಸಂತರ್ಪಣೆ, ಮಹಾ ಮಂತ್ರಾಕ್ಷತೆ, ಫೆ. 21 ರಂದು ಶ್ರೀ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ಪವಮಾನಭಿಷೇಕ ಸಹಿತ ನಾಗತಂಬಿಲಗಳು ನಡೆಯಲಿವೆ.




