“ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ” – ನಂದನ್ ಮಲ್ಯ
ಮಂಗಳೂರು : ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಚರ್ಚಾ ಸಂಘವಾದ “ಸಂವಾದ ವೇದಿಕಾ” ಉದ್ಘಾಟನಾ ಕಾರ್ಯಕ್ರಮವು ಸ್ವಸ್ತಿಕಾ ವಾಟರ್ಫ್ರಂಟ್ನಲ್ಲಿ ಭವ್ಯವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಚರ್ಚಾ ಸಂಸ್ಕೃತಿ, ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂಸತ್ತೀಯ ಕಾರ್ಯವೈಖರಿಯ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಈ ವೇಳೆ ವಿದ್ಯಾರ್ಥಿ ವೇದಿಕೆಯ ವಿದ್ಯಾರ್ಥಿ ಸಂಸತ್ ಅಧಿವೇಶನವೂ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಜೆ. ಆರ್. ಲೋಬೋ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು ಪ್ರತಿಯೊಬ್ಬ ಯುವಕರು ರಾಜಕೀಯದ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಪ್ರಜಾಪ್ರಭುತ್ವದ ವ್ಯವಸ್ಥೆ, ಆಡಳಿತ ಕ್ರಮಗಳು ಹಾಗೂ ಸಾರ್ವಜನಿಕ ನೀತಿಗಳ ಅರಿವು ಉತ್ತಮ ನಾಗರಿಕರನ್ನು ರೂಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಯುವಜನತೆ ಸಮಾಜಮುಖಿ ಚಿಂತನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ನಂದನ್ ಮಲ್ಯ, ಅಧ್ಯಕ್ಷರು, ಭಾ.ಜ.ಯು.ಮೋ. ದಕ್ಷಿಣ ಕನ್ನಡ ಜಿಲ್ಲೆ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು. ಯುವಕರು ರಾಷ್ಟ್ರದ ಅಭಿವೃದ್ಧಿ, ಸಾಮಾಜಿಕ ಜವಾಬ್ದಾರಿ ಹಾಗೂ ಮೌಲ್ಯಾಧಾರಿತ ನಾಯಕತ್ವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ರಾಘವೇಂದ್ರ ಹೊಳ್ಳ ಎನ್. ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಾಂಶುಪಾಲರಾದ ಡಾ. ಮಾಲಿನಿ ಎನ್. ಹೆಬ್ಬಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ತಮ್ಮ ಉಪಸ್ಥಿತಿ ನೋಟಿನಲ್ಲಿ ಚರ್ಚಾ ಸಂಸ್ಕೃತಿ ಪ್ರತಿಯೊಬ್ಬರಲ್ಲು ಇರಬೇಕು ಹಾಗೂ ಪ್ರತಿಯೊಬ್ಬರು ಚರ್ಚೆಯಲ್ಲಿ ಆಸಕ್ತಿ ತೋರಬೇಕು ಎಂದು ಹೇಳಿದರು. ಚರ್ಚಾ ಸಂಘ ಸ್ಥಾಪನೆ ಹಾಗೂ ವಿದ್ಯಾರ್ಥಿ ಸಂಸತ್ ಆಯೋಜನೆಗೆ ಮುನ್ನಡೆ ವಹಿಸಿದ ಮುಳಿಯ ಸಾತ್ವಿಕ್ ಅವರ ಮುಂದಾಳತ್ವವನ್ನು ಎಲ್ಲಾ ಗಣ್ಯರು ಪ್ರಶಂಸಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕು. ಸಿಂಚನಾ ಸ್ವಾಗತಿಸಿದರು ಹಾಗೂ ಕೊನೆಯಲ್ಲಿ ಕು. ಸಿಂಧು ವಂದನಾರ್ಪಣೆ ಸಲ್ಲಿಸಿದರು.







