ಕುಂದಾಪುರ: ಅಕ್ರಮವಾಗಿ ಮರಳುಗಾರಿಗೆ ನಡೆಸುತ್ತಿದ್ದ ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮರಳು ಧಕ್ಕೆಯ ಸೂಪರ್ವೈಸರ್ ಅಜ್ಮಲ್, ಕಾರ್ಮಿಕರಾದ ರಾಮಶಂಕರ ರಾಜಬೀರ್(35), ರಾಮ ಕುಮಾರ್(40), ಗೋವಿಂದ ಚೌದರಿ(26), ಶಿವಮುನಿ(32), ಜುನ್ನ ರಾಜಬೀರ(35), ಸತ್ಯಾದೇವ(30), ಕಮಲೇಶ ನಿಸಾದ್(35), ಸಂತೋಷ ನಿಸಾದ್(23), ಓಂ ಪ್ರಕಾಶ ರಾಜಬರ್(34), ರಮೇಶ ರಾಜಬರ್(35) ಎಂದು ಗುರುತಿಸಲಾಗಿದೆ.

ಕುಂದಾಪುರದ ಕಂಡ್ಲೂರು ಸೇತುವೆ ಸಮೀಪದ ವಾರಾಹಿ ನದಿಯಲ್ಲಿ ಮರಳು ಧಕ್ಕೆಯ ಮಾಲಕ ಸುನೀಲ್ ಶೆಟ್ಟಿ ಹಾಗೂ ಸೂಪರ್ವೈಸರ್ ಅಜ್ಮಲ್ ಅವರು ಕಾರ್ಮಿಕರಿಂದ ಜಿಯೋ-ಫೆನ್ಸಿಂಗ್ ಗಡಿ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಮರಳು ತೆಗೆಯಿಸಿ ಸಾಗಾಟ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸ್ಥಳದಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ ನಾಲ್ಕು ದೋಣಿಗಳು, ದೋಣಿಗಳಲ್ಲಿದ್ದ 4,500 ರೂ. ಮೌಲ್ಯದ ಒಟ್ಟು ಸುಮಾರು ಮೂರುವರೆ ಯುನಿಟ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







