ಬೆಳ್ತಂಗಡಿ: ಅಪಹರಣಕಾರಿಂದ ಚೂರಿ ಇರಿತಕ್ಕೆ ಒಳಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಶಾಸಕ ಹರೀಶ್ ಪೂಂಜ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಘಟನೆಯ ಮಾಹಿತಿಯನ್ನು ಪಡೆದುಕೊಂಡರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಜೊತೆ ಮಾತಾನಾಡಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಘಟನೆ:
ಫೆ. 9 ರಂದು ಬೆಳ್ತಂಗಡಿ ತಾಲೂಕಿನ ಸುದೇಮುಗೇರು ಎಂಬಲ್ಲಿ ನಂಬರ್ ಪ್ಲೇಟ್ ಗೆ ಬಟ್ಟೆ ಕಟ್ಟಿದ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ತನ್ನ ತಂದೆಯ ಸ್ಕೂಟರ್ ನಲ್ಲಿ ಸಂತೆಕಟ್ಟೆ ಬಸ್ ಹತ್ತಲು ಹೋಗುತ್ತಿದ್ದ ಕಾಶಿಬೆಟ್ಟು ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯ ಸ್ಕೂಟರ್ ನ್ನು ಅಡ್ಡಗಟ್ಟಿದ್ದಾರೆ.

ಬಳಿಕ ಕಾರಿನೊಳಗೆ ಎಳೆದು ತಂದಾಗ ಆಕೆ ಜೋರಾಗಿ ಬೊಬ್ಬೆ ಹಾಕಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇತ್ತ ಹಿಂಭಾಗದಿಂದ ಸ್ಕೂಟರ್ ವೊಂದು ಬರುವುದನ್ನು ನೋಡಿ ಬಾಲಕಿಗೆ ಚೂರಿಯಿಂದ ಕೈಗೆ ,ಬೆರಳಿಗೆ ಚುಚ್ಚಿ ಕಾಲೇಜ್ ಬ್ಯಾಗ್ ಹಿಡಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಸದ್ಯ ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.






