Breaking
3 Feb 2026, Tue

ಬಿಸಿ ರೋಡಿನ ಮಹಾಕಾಳಿ ಬೆಟ್ಟು ಮೈದಾನದಲ್ಲಿ ಹಿಂದೂ ಸಂಗಮ

ಹಿಂದೂ ಎಂದರೆ ಭಾರತದ ಅಸ್ಮಿತೆ – ಡಾ. ಮನೋಜ್ ಸುಳ್ಯ

ಬಂಟ್ವಾಳ: ಹಿಂದೂ ಸಂಗಮ ಆಯೋಜನಾ ಸಮಿತಿ ಬಂಟ್ವಾಳ ತಾಲೂಕು ಹಾಗೂ ಬಂಟ್ವಾಳ ಮೂಡ ಮಂಡಲದ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮವು ಬಿಸಿ ರೋಡಿನ ಮಹಾಕಾಳಿ ಬೆಟ್ಟು ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಭವ್ಯ ಶೋಭಾಯಾತ್ರೆಯು ಕೈಕಂಬ ಪೊಳಲಿ ದ್ವಾರದಿಂದ ಹೊರಟು ಮಹಾಕಾಳಿ ಬೆಟ್ಟು ಮೈದಾನಕ್ಕೆ ತಲುಪಿತು. ಶೋಭಾಯಾತ್ರೆಯಲ್ಲಿ ಶಂಖನಾದ, ಕಳಶ, ಭಾರತಮಾತೆಯ ಭಾವಚಿತ್ರದ ವಾಹನ, ವೀರಪುರುಷರ ವೇಷಧಾರಿಗಳು, ಚೆಂಡೆ ವಾದ್ಯ, ಹುಲಿ ಕುಣಿತ, ಗೊಂಬೆ ಕುಣಿತ ಹಾಗೂ ಕುಣಿತ ಭಜನೆ ಜನಮನ ಸೆಳೆದವು.

ಅಬ್ಬಕ್ಕ ದೇವಿಯ ವೀಡಿಯೊವನ್ನು ಪರದೆಯ ಮೂಲಕ ವೀಕ್ಷಿಸಿದ ಬಳಿಕ ಸ್ವಾಗತ ನೃತ್ಯ ಕಾರ್ಯಕ್ರಮ ನಡೆಯಿತು. ನಂತರ ಗೋಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹಸೇವಾ ಪ್ರಮುಖ ಡಾ. ಮನೋಜ್ ಸುಳ್ಯ ಅವರು, ಹಿಂದು ಎಂದರೆ ಭಾರತದ ಅಸ್ಮಿತೆ. ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಿಂದು ಎನ್ನಲು ಕೀಳರಿಮೆ ಬೇಡ. ಸಾಮರಸ್ಯದ ಸಹಬಾಳ್ವೆ ಹಾಗೂ ಪರಿಸರದ ಕಾಳಜಿಯೊಂದಿಗೆ ಜಾಗೃತರಾಗಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆಯೋಜನಾ ಸಮಿತಿ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರ್ ಗುತ್ತು ಶುಭ ಹಾರೈಸಿದರು. ಬಿಸಿ ರೋಡಿನ ಪುರೋಹಿತರು ಹಾಗೂ ಜ್ಯೋತಿಷ್ಯರಾದಂತಹ ವಿದ್ವಾನ್ ಮಹೇಶ್ ಭಟ್ ಹಿತ ನುಡಿಗಳನ್ನಾಡಿದರು. ಲಕ್ಷ್ಮಣ ಅಗ್ರಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ವಾರಿಜಾ ಆಚಾರ್ಯ, ದಾಮೋದರ ಸಂಚಯಗಿರಿ ಹಾಗೂ ರಮೇಶ್ ಶೆಣೈ ಅವರಿಗೆ ಗೌರವಾರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಅಧ್ಯಕ್ಷ ವಿಶ್ವನಾಥ ಬಿ, ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷ ಲೋಕನಾಥ ಶೆಟ್ಟಿ, ಕುಂಭೋದರಿ ದೇವಿ ದೇವಸ್ಥಾನ ಕುಲಾಲರ ಮಠ ಟ್ರಸ್ಟಿ ಯೋಗೀಶ್ ಮಠ, ಹಿಂದು ರುದ್ರಭೂಮಿ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಣೈ,, ಅಲೆತ್ತೂರು ಶ್ರೀ ಧೂಮಾವತಿ ಬಂಟ ಪಂಜುರ್ಲಿ ದೈವಸ್ಥಾನದ ಪರಿಚಾರಕ ಬಾಬು ಗಟ್ಟಿ, ಕಿರಣ್ ಮಹಾಕಾಳಿಬೆಟ್ಟು, ಪ್ರಮುಖರಾದ ಸುಗುಣ ಕಿಣಿ, ಉಮೇಶ್ ಎಲ್, ನಾಯಕ್, ಬಿ.ಮೂಡ ಮಂಡಲ ಕಾರ್ಯವಾಹ ಗಣೇಶ್ ಕಾಮಾಜೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಷ್ಟೀಯ ಸ್ವಯಂ ಸೇವಕ ಸಂಘ, ಬಂಟ್ವಾಳ ತಾಲೂಕು ಗ್ರಾಮ ವಿಕಾಸ ಗೋ ಸೇವಾ ಪ್ರಮುಖ್ ಸತೀಶ್ ಪಲ್ಲಮಜಲು ವಂದಿಸಿದರು. ರಮ್ಯಾ ಕಾರ್ಯಕ್ರಮ ನಿರ್ವಹಿಸಿದರು. ವರ್ಷಾ ಅಜ್ಜಿಬೆಟ್ಟು ವೈಯಕ್ತಿಕ ಗೀತೆ ಹಾಡಿದರು. ಯಶ್ಮಿತಾ ಕಾಮಾಜೆ ತುಳು ಜನಪದ ಗೀತೆಯನ್ನು ಹಾಡಿದರು. ಭಾಸ್ಕರ ದಾಸ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *