‘ದೈವ ದೇವರ ಹೆಸರಿನಲ್ಲಿ ಹಿಂದೂ ಸಮಾಜ ಒಗ್ಗೂಡುವುದು ಅನಿವಾರ್ಯ’- ಡಾ. ಪ್ರಭಾಕರ ಭಟ್ ಕಲ್ಲಡ್ಕ
ವಿಟ್ಲ: ಕಂಬಳಬೆಟ್ಟು ಧರ್ಮನಗರ ಜೇರ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಡಿ.೨೧ರಿಂದ ೨೫ರವರೆಗೆ ನಡೆಯಲಿರುವ ಸಾನಿಧ್ಯ ವೃದ್ಧಿ ಬ್ರಹ್ಮಕಲಶೋತ್ಸವಥ ಪ್ರಯುಕ್ತ ಭಾನುವಾರ ಚಪ್ಪರ ಮುಹೂರ್ತ ನಡೆಯಿತು .
ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ದೀಪ ಪ್ರಜ್ವಲನೆ ನೆರವೇರಿಸಿ, ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ದೈವ ದೇವರ ಹೆಸರಿನಲ್ಲಿ ಹಿಂದೂ ಸಮಾಜ ಒಗ್ಗೂಡುವುದು ಅನಿವಾರ್ಯ. ಸಮಾಜ ಜಾಗೃತವಾಗದಿದ್ದರೆ ನಮ್ಮ ನೆಲ ಜಲವೂ ಅನ್ಯರ ಪಾಲಾದೀತು. ಜಗತ್ತು ಉಳಿಯಬೇಕಾದರೆ, ಹಿಂದು ಸಮಾಜ ಉಳಿಯಬೇಕಾಗಿದೆ. ಕಲ್ಲಿನಲ್ಲಿ ದೈವತ್ವವನ್ನು ಕಾಣುವ ಕಲ್ಪನೆಯಿರುವ ಭಾರತದಲ್ಲಿ ಭೂಮಿಯನ್ನು ಪ್ರೀತಿಸುವ ಜತೆಗೆ ಆರಾಧಿಸುವ ಸಂಸ್ಕೃತಿಯಿದೆ ಎಂದು ಹೇಳಿದರು.
ಹಂತ ಹಂತದಲ್ಲಿ ದೇವರನ್ನು ಕಾಣುವ ಕಾರ್ಯ ನಮ್ಮ ಆಚರಣೆಗಳಲ್ಲಿ ನಡೆದುಕೊಂಡು ಬಂದಿದೆ. ಮನೆ ಮನೆಯಲ್ಲಿ ರಾಮಾಯಣ ಮಹಾಭಾರತ ಓದು ಅಭ್ಯಾಸ ಮಾಡಬೇಕು. ಜಗತ್ತಿನ ಎಲ್ಲೂ ಇಲ್ಲದ ಕಾನೂನು ನಮ್ಮಲ್ಲಿ ಬರುತ್ತಿದೆ. ಮಠ ದೇವಸ್ಥಾನ, ಸ್ವಂತ ಆಸ್ತಿಗಳು ಪರರ ಪಾಲಾಗುತ್ತಿದೆ. ಭೂಮಿಯನ್ನು ಉಳಿಸುವ ಕಾರ್ಯವಾಗಬೇಕು. ಇಲ್ಲದೇ ಹೋದರೆ ನಮ್ಮ ಭೂಮಿಯಲ್ಲಿ ಇನ್ನೊಂದು ಪಾಕಿಸ್ತಾನ ಆಗುತ್ತದೆ ಎಂದು ತಿಳಿಸಿದರು.
ರಜತಾದ್ರಿ ಚಾಮುಂಡೇಶ್ವರ ದೇವಸ್ಥಾನದ ಧರ್ಮದರ್ಶಿ ಕೃಷ್ಣಪ್ಪ ಪೂಜಾರಿ, ಪಿಲಿಂಜ ನಡುಮನೆ ಮಲರಾಯ ದೈವಸ್ಥಾನ ಅಧ್ಯಕ್ಷ ಸೇಸಪ್ಪ ಗೌಡ ಹಡೀಲು ಚಪ್ಪರ ಮುಹೂರ್ತ ನಡೆಸಿದರು.
ಬಾಲಕೃಷ್ಣ ಗೌಡ ಅಮೈ, ರಮೇಶ್ ಭಟ್ ಎಂ.ಭಂಡಾರದ ಮನೆ, ಕುಂಡಡ್ಕ ನಾರಾಯಣ ಶೆಟ್ಟಿ, ಜಯರಾಮ ಪೂಜಾರಿ ಕಾರ್ಯಾಡಿಗುತ್ತು ತೋರಣ ಮುಹೂರ್ತಕ್ಕೆ ಚಾಲನೆ ನೀಡಿದರು.
ಜಯರಾಮ ಜೋಯಿಸರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡೈಮಾರು ವಹಿಸಿದ್ದರು.
ಉಪಾಧ್ಯಕ್ಷ ಬೀಡಿನಮಜಲು ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ. ಎಸ್. ಉರಿಮಜಲು, ಸಂಘಟನಾ ಕಾರ್ಯದರ್ಶಿ ಮಹಾಬಲ ಆಚಾರ್ಯ, ವಕೀಲ ಗೋವಿಂದ ರಾಜ್ ಪೆರುವಾಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಆಶಾ ಪಾರ್ವತಿ, ವಾಸ್ತು ತಜ್ಞ ಬಾಬು ಆಚಾರ್ಯ ಅಳಕೆಮಜಲು, ಸಂಜೀವ ದರ್ಬೆ, ಸಂಘಟನಾ ಕಾರ್ಯದರ್ಶಿ ಮಹಾಬಲ ಆಚಾರ್ಯ ಉಪಸ್ಥಿತರಿದ್ದರು.
ಚರಣ್ ಅಮೈ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶ ಸ್ವಾಗತ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಅಮೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಸಮಿತಿ ಕೊಶಾಧಿಕಾರಿ ಸುರೇಂದ್ರ ಕಾರ್ಯಾಡಿ ವಂದಿಸಿದರು. ಜಯಕರ ಅಮೈ ಕಾರ್ಯಕ್ರಮ ನಿರೂಪಿಸಿದರು.



