ಪುತ್ತೂರು: ಶಿಕ್ಷಣ ಜ್ಞಾನ ಪತ್ರಿಕೆಯ 23ನೇ ವಾರ್ಷಿಕೋತ್ಸವ, ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 21 ರಂದು ಶ್ರೀ ಶಿವಲಿಂಗೇಶ್ವರ ಕಲ್ಯಾಣ ಮಂದಿರ ತಣ್ಣೀರುಹಳ್ಳ ಮಠ ಹಾಸನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಕಬಕ ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಬಕ ಪ್ರೌಢಶಾಲೆ ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಶಾಂತಾ ಪುತ್ತೂರು ಶಾಲಾ ಪರವಾಗಿ ಗೌರವ ಸ್ವೀಕರಿಸಿದರು.

ಈ ವೇಳೆ ಶ್ರೀ ಶ್ರೀ ಶ್ರೀ ವಿಜಯಕುಮಾರ ಮಹಾಸ್ವಾಮಿಗಳು ತಣ್ಣೀರುಹಳ್ಳ ಮಠ ಹಾಸನ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಎನ್. ಗಂಗಾಧರಪ್ಪ ಮೈಸೂರು, ಶಿಕ್ಷಣ ಜ್ಞಾನ ಮಾಸ ಪತ್ರಿಕೆ ಸಂಪಾದಕರಾದ ಶ್ರೀ ಎಸ್ ವಿ ನಾಗರಾಜ್ , ಜ್ಞಾನ ಜ್ಯೋತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ರಾಜೀವ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆ , ಪ್ರಶಸ್ತಿ ಪುರಸ್ಕೃತರ ಮನೆಯವರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪೆರ್ಲಂಪಾಡಿ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮ ಪೆರ್ಲಂಪಾಡಿಯವರಿಗೆ ಜ್ಞಾನ ಚಿಗುರು ಕವಚ ರಾಜ್ಯ ಪ್ರಶಸ್ತಿ, ಕಡಬ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವಾಸುದೇವ ಗೌಡ. ಕೆ.ರವರಿಗೆ ಜ್ಞಾನ ಸಂಜೀವಿನಿ ರಾಜ್ಯ ಪ್ರಶಸ್ತಿ, ಕಬಕ ಪ್ರೌಢಶಾಲೆ ಶಿಕ್ಷಕಿ ಯಶೋಧಾ. ಕೆ. ಯವರಿಗೆ ಜ್ಞಾನ ಸಿಂಧು ರಾಜ್ಯ ಪ್ರಶಸ್ತಿ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಶಿಕ್ಷಕ ಶ್ರೀ ಜನಾರ್ದನ ದುರ್ಗ ರವರಿಗೆ ಜ್ಞಾನ ಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.




