ಬಂಟ್ವಾಳ : ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಸಹಕಾರಿ ಭಾರತೀಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿ ಹಾಗೂ ನಿರ್ದೇಶಕರಿಗೆ ಅಭ್ಯಾಸ ವರ್ಗವು ನ. 11 ರಂದು ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಮಾಜಿ ಶಾಸಕ ಹಾಗೂ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಮಾತನಾಡಿ, ಸಹಕಾರಿ ಭಾರತಿ ಬಂಧುಗಳು ಅಭ್ಯಾಸ ವರ್ಗದಲ್ಲಿ ಸಿಗುವ ಮಾಹಿತಿಯನ್ನು ಪಡೆದುಕೊಂಡು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಹಕಾರ ಭಾರತಿ ಕ್ಷೇತ್ರದ ಬಲವರ್ಧನೆಗೆ ಕಾರಣವಾಗಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ಭಾರತಿ ರಾಜ್ಯಾಧ್ಯಕ್ಷ ಪ್ರಭುದೇವ ಆರ್ ಮಾಗನೂರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರೇರಣೆಯಿಂದ ಹಿರಿಯರ ಮಾರ್ಗದರ್ಶನದೊಂದಿಗೆ ಸಹಕಾರಿ ಬಂಧುಗಳ ಪ್ರೀತಿ ವಿಶ್ವಾಸದ ನಡುವೆ ಕರಾವಳಿ ಭಾಗದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ ದಕ್ಷಿಣ ಕನ್ನಡ ಸಹಕಾರ ಭಾರತಿಗೆ ಮತ್ತಷ್ಟು ಶಕ್ತಿ ತುಂಬಿಸುವ ಕೆಲಸ ಆಗಲಿ ಎಂದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೊ ಮಾಜಿ ನಿರ್ದೇಶಕ ರಾಧಾಕೃಷ್ಣ ಕೋಟೆ ಬರೆದ ಪುಸ್ತಕ ಸಹಕಾರಿ ಆಡಳಿತ ನಿರ್ವಹಣೆ ಎನ್ನುವ ಪುಸ್ತಕ ಬಿಡುಗಡೆ ಮಾಡಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರ ಭಾರತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಸಹಕಾರ ಭಾರತಿ ಪರಿಚಯದ ಬಗ್ಗೆ ಹಾಗೂ ಸಹಕಾರ ಭಾರತೀಯ ಪೂರ್ವ ಮಧ್ಯ ಕ್ಷೇತ್ರ ಸಂಪರ್ಕ ಪ್ರಮುಖ ಎಸ್ ಆರ್ ಸತೀಶ್ಚಂದ್ರ, ಆಡಳಿತ ಮಂಡಳಿಯ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಹಕಾರ ಭಾರತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಬಿ ಆರ್ , ಮಹಿಳಾ ಪ್ರಮುಖ ಎಸ್ ಸುಭದ್ರ ರಾವ್ ಉಪಸ್ಥಿತರಿದ್ದರು.
ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕಿ ವಿಜಯ ಪ್ರಕಾಶ್ ಸಹಕಾರ ಗೀತೆ ಹಾಡಿದರು. ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ ಸುಧಾಕರ್ ರೈ ಪ್ರಸ್ತಾವನೆದೊಂದಿಗೆ ಸ್ವಾಗತಿಸಿದರು, ಉಪಾಧ್ಯಕ್ಷ ವಿಶ್ವನಾಥ ಎಂ ವಂದಿಸಿದರು.



