ಕುಂದಾಪುರ: 5. ರೂಪಾಯಿ ಖ್ಯಾತಿಯ ಕುಂದಾಪುರ ತಾಲೂಕಿನ ಮಾಬುಕಳ ಹಂಗಾರಕಟ್ಟೆ ಬಾಳ್ಕುದ್ರುವಿನ ಖ್ಯಾತ ವೈದ್ಯ ಡಾ. ಕೆ.ಪಿ. ಶೆಟ್ಟಿ (77) ಅವರು ನ.4 ರಂದು ನಿಧನ ಹೊಂದಿದ್ದಾರೆ.
ಜನಸ್ನೇಹಿ ವೈದ್ಯರಾಗಿ ಸಾಸ್ತಾನ, ಹಂಗಾರಕಟ್ಟೆ ಪರಿಸರದಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದ ಡಾ. ಕೆ.ಪಿ. ಶೆಟ್ಟಿ ಅವರು ಸುಮಾರು 55 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.

ತನ್ನೂರಿನ ಜನರ ಸೇವೆಗಾಗಿ ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕ್ಲಿನಿಕ್ ಆರಂಭಿಸಿದ್ದ ಅವರು 5 ರೂ. ವೈದ್ಯರು ಎಂದೇ ಖ್ಯಾತರಾಗಿದ್ದರು. ತಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಬಳಿ 30 ರೂ. ಪಡೆದು ಎಲ್ಲ ಔಷಧಗಳನ್ನು ನೀಡುತ್ತಿದ್ದರು. ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಬಾಳ್ಕುದ್ರು ಶಾಲೆಯ ಶತಮಾನೋತ್ಸವ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಅವರ ಈ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ.
ಮೃತರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.





