Breaking
9 Aug 2026, Sun

ಉಳ್ಳಾಲದಲ್ಲಿ ಅಕ್ರಮ ಗೋ ಸಾಗಾಟ ಆರೋಪಿಯ ಮನೆ ಮುಟ್ಟುಗೋಲು

ಮಂಗಳೂರು : ನ.2 ರಂದು ಧರ್ಮಸ್ಥಳ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನು ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಜಪ್ತಿ ಮಾಡಿದ್ದಾರೆ.

ಭಾನುವಾರದಂದು ಆರೋಪಿಗಳಾದ ಮಹಮ್ಮದ್ ಖಲೀಲ್ ಅಲಿಯಾಸ್ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು ಕೆಎ-19-ಎಮ್‌ಸಿ -5862 ನಂಬರಿನ ರಿಟ್ಜ್ ಕಾರಿನಲ್ಲಿ ಸಾಗಾಟ ಮಾಡುವಾಗ ಸಿಕ್ಕಿ ಬಿದ್ದಿದ್ದರು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದನ ನೀಡಿದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೋಹಾರ ಸೇರಿ ಮೂವರ ವಿರುದ್ಧ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ, ಪ್ರಾಣಿ ಹಿಂಸೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಮೂರು ದನಗಳನ್ನು ಉಳ್ಳಾಲ ತಾಲೂಕಿನ ಸಜಿಪನಾಡು ಗ್ರಾಮದ ತಂಚಿಬೆಟ್ಟು ನಿವಾಸಿ ಇಬ್ರಾಹಿಂ ಖಲೀಲ್ ಅಲಿಯಾಸ್ ತೌಸೀಫ್ ಮನೆಯಲ್ಲಿ ಗೋಮಾಂಸ ಮಾಡುವುದಕ್ಕಾಗಿ ಕೊಂಡುಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದರು. ಇದರಿಂದ ಧರ್ಮಸ್ಥಳ ಪೊಲೀಸರು ಉಳ್ಳಾದಲ್ಲಿರುವ ಇಬ್ರಾಹಿಂ ಖಲೀಲ್ ಅಲಿಯಾಸ್ ತೌಸೀಫ್ ಮನೆಯನ್ನು ನ.4 ರಂದು ಜಪ್ತಿ ಮಾಡಿದ್ದಾರೆ.

Leave a Reply

Your email address will not be published. Required fields are marked *