ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕರ ಕಛೇರಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು, ಬೆಂಜನಪದವು ಇವರ ಸಂಯುಕ್ತ ಆಶ್ರಯದಲ್ಲಿ ಮತ್ತು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ ನಾಯ್ಕ ಉಳಿಪ್ಪಾಡಿ ಇವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವು ಅ. 25 ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಶಾಸಕ ಮಂಜುನಾಥ ಭಂಡಾರಿ ವಹಿಸಿದ್ದರು. ಕ್ರೀಡಾಕೂಟವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುವ ಕ್ರೀಡೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ, ಕ್ರೀಡಾಮನೋಭಾವದಿಂದ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದಾಗ ಕ್ರೀಡೆ ಗೆಲ್ಲುತ್ತದೆ; ಕ್ರೀಡಾಪಟುಗಳು ಆಟದಿಂದ ಪಾಠ ಕಲಿತು ವಿಕಾಸಗೊಳ್ಳಬೇಕು ಎಂದರು.
ಅಮ್ಮುಂಜೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ರಾಧಾಕೃಷ್ಣ ತಂತ್ರಿ ಅವರು ಕ್ರೀಡಾ ಧ್ವಜಾರೋಹಣಗೈದರು. ಸರ್ಕಾರಿ ಪದವಿಪೂರ್ವ ಕಾಲೇಜು, ಬೆಂಜನಪದವಿನ ವಿದ್ಯಾರ್ಥಿ ಮಹಮ್ಮದ್ ಹಾಶೀರ್ ಕ್ರೀಡಾಪಟುಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ವಾಮನ ಆಚಾರ್ಯ, ಸರ್ಕಾರಿ ಪದವಿಪೂರ್ವ ಕಾಲೇಜು, ಬಿ.ಮೂಡದ ಪ್ರಾಂಶುಪಾಲರಾದ ಯೂಸುಫ್ , ಜಿಲ್ಲಾ ಕ್ರೀಡಾ ಸಂಯೋಜಕರಾದ ಪ್ರೇಮನಾಥ ಶೆಟ್ಟಿ, ತಾಲೂಕು ಕ್ರೀಡಾ ಸಂಯೋಜಕರಾದ ಸಾಯಿರಾಂ ನಾಯಕ್ , ಸರ್ಕಾರಿ ಪದವಿಪೂರ್ವ ಕಾಲೇಜು(ಪ್ರೌಢಶಾಲೆ), ಬೆಂಜನಪದವು ಇದರ ಮುಖ್ಯೋಪಾಧ್ಯಾಯರಾದ ಜಾನೆಟ್ ಲೋಬೋ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಕವಿತ ಹೇಮಚಂದ್ರ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕರಾದ ಹಾಗೂ ಕಾಲೇಜಿನ ಕ್ರೀಡಾ ಸಂಯೋಜಕರಾದ ಮೇದಪ್ಪ ಜಿ ಆರ್ ವಂದಿಸಿದರು. ವಿದ್ಯಾರ್ಥಿನಿಯರಾದ ಕು. ಧನುಶ್ರೀ, ಕು. ಸನ್ಮಿತಾ, ರುಕಿಯಾ ಫಲಾಹತ್ , ಮಿಸ್ಬಾ, ಹಾಗೂ ಕು. ಶ್ರೀವಾಣಿ ಪ್ರಾರ್ಥಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿಯವರು ಕಾರ್ಯಕ್ರಮ ನಿರೂಪಿಸಿದರು.

ವೈಯಕ್ತಿಕ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಮೊಡಂಕಾಪುವಿನ ಕಾರ್ಮೆಲ್ ಪದವಿಪೂರ್ವ ಕಾಲೇಜು, ವಿದ್ಯಾರ್ಥಿಗಳಾದ ಮೆಲ್ರಾಯ್ ಸನ್ವಿಲ್ ಡಿಸೋಜ ಹಾಗೂ ಕು. ಶರಣ್ಯ ವಿ ಹೊಳ್ಳ ಚಾಂಪಿಯನ್ ಗಳಾದರು. ಬಾಲಕರ ವಿಭಾಗದಲ್ಲಿ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು, ಅಳಿಕೆ ಹಾಗೂ ಬಾಲಕಿಯರ ವಿಭಾಗದಲ್ಲಿ ರಾಮಚಂದ್ರ ಪದವಿಪೂರ್ವ ಕಾಲೇಜು, ಪೆರ್ನೆ ಸಮಗ್ರ ಪ್ರಶಸ್ತಿ ಪಡೆದವು.

ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿಪೂರ್ವ ಕಾಲೇಜು, ಬೆಂಜನಪದವು ಇದರ ಪ್ರಾಂಶುಪಾಲರಾದ ಕವಿತ ಹೇಮಚಂದ್ರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ಸದಾಕತ್ ಮಾತನಾಡಿ, ವಿಜೇತರನ್ನು ಹಾಗೂ ಕ್ರೀಡಾಪಟುಗಳನ್ನು ಅಭಿನಂದಿಸಿ, ಕ್ರೀಡೆಯಲ್ಲಿ ಕ್ರೀಡಾ ಮನೋಭಾವ, ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು. ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಧು, ವಿಜೇತರಿಗೆ ಬಹುಮಾನ ವಿತರಿಸಿ, ಶುಭ ಹಾರೈಸಿದರು.
ಗಣಿತ ಶಾಸ್ತ್ರ ಉಪನ್ಯಾಸಕರಾದ ರವಿಚಂದ್ರ ಮಯ್ಯ ಅವರು ಸ್ವಾಗತಿಸಿ, ಬಂಟ್ವಾಳ ತಾಲೂಕು ಕ್ರೀಡಾ ಸಂಯೋಜಕರಾದ ಸಾಯಿರಾಂ ನಾಯಕ್ ವಂದಿಸಿದರು. ಬಂಟ್ವಾಳ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಹಕರಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್ ಕಾರ್ಯಕ್ರಮ ನಿರೂಪಿಸಿದರು .



