ವಿಟ್ಲ ಸಮೀಪದ ಕೇಪು ಗ್ರಾಮದ ಕುದ್ದುಪದವು ಪ್ರದೇಶದಲ್ಲಿ ಆವರಣ ಗೋಡೆಯಿಲ್ಲದ ತೆರೆದ ಬಾವಿಗೆ ಬಿದ್ದಿದ್ದ 8 ತಿಂಗಳ ಗರ್ಭಿಣಿ ದನವನ್ನು ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಪಶುವೈದ್ಯರ ತಂಡದ ಸಹಕಾರದಿಂದ ಯಶಸ್ವಿಯಾಗಿ ರಕ್ಷಿಸಲಾಯಿತು.

ಸದಾನಂದ ಶೆಟ್ಟಿ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ವೇಳೆ ಕಾಸಿಂ ಅವರ ಮನೆಯ ಸಮೀಪದ ತೆರೆದ ಬಾವಿಗೆ ಅದು ಆಕಸ್ಮಿಕವಾಗಿ ಬಿದ್ದಿದೆ. ಸ್ಥಳಕ್ಕೆ ಧಾವಿಸಿದ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಆರಂಭಿಕ ರಕ್ಷಣಾ ಪ್ರಯತ್ನ ನಡೆಸಿದರೂ ಕಾರ್ಯಾಚರಣೆ ಸವಾಲಿನದ್ದಾಗಿದ್ದರಿಂದ ಬಳಿಕ ಕ್ರೇನ್ ಸಹಾಯದಿಂದ ದನವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.

ನಂತರ ಪಶುಗಳ ತುರ್ತು ಚಿಕಿತ್ಸಕ ಡಾ. ಸುನಿಲ್ ಬಂಟ್ವಾಳ, ಚಾಲಕ ಜಯಗಣೇಶ್ ಹಾಗೂ ಅಡ್ಯನಡ್ಕ ಪಶುವೈದ್ಯ ಪರಿವೀಕ್ಷಕ ಲಕ್ಷ್ಮಣ ಸರವು ಅವರ ತಂಡ ದನಕ್ಕೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿತು.

ಈ ಘಟನೆಯ ಬಳಿಕ ತೆರೆದ ಬಾವಿಗಳಿಗೆ ಸುರಕ್ಷತಾ ಗೋಡೆ ನಿರ್ಮಿಸುವ ಅಗತ್ಯದ ಬಗ್ಗೆ ಸ್ಥಳೀಯರು ಗಮನ ಸೆಳೆದಿದ್ದಾರೆ.


