ಮಂಗಳೂರು: ಫರಂಗಿಪೇಟೆಯ ಅರ್ಕುಳ ಚೆಕ್ ಪಾಯಿಂಟ್ ನಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.
ಲಾರಿ ಚಾಲಕನನ್ನು ಅಡ್ಯಾರ್ ಪದವು ಲೋಬೊ ಕಾಲನಿ ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದೆ.

ಅ. 27 ರಂದು ಬೆಳಗ್ಗೆ ಸುಮಾರು 10.20ರ ವೇಳೆಗೆ ಚೆಕ್ ಪಾಯಿಂಟ್ನಲ್ಲಿ ಬಂದ ಲಾರಿಯನ್ನು ಕರ್ತವ್ಯದಲ್ಲಿದ್ದ ಪೊಲೀಸರು ತಡೆದು ಹಿಂಭಾಗಕ್ಕೆ ಹಾಕಿದ್ದ ಟಾರ್ಪಾಲನ್ನು ತೆರೆದು ನೋಡಿದಾಗ ಕೆಂಪು ಕಲ್ಲು ಪತ್ತೆಯಾಗಿದೆ. ಲಾರಿಯ ಚಾಲಕ ಮತ್ತು ಮಾಲಕ ಸಾರ್ವಜನಿಕ ಖನಿಜ ಸಂಪತ್ತಾದ ಕೆಂಪು ಕಲ್ಲುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದಾರೆಂದು ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಲ್ಲಿ ಸುಮಾರು 12 ಸಾವಿರ ರೂ. ಮೌಲ್ಯದ ಕೆಂಪು ಕಲ್ಲುಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.




