ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ ಮಾಡಿರುವ ಆರೋಪಿಗಳಿಗೆ ಸೇರಿದ ಕಟ್ಟಡ ಹಾಗೂ ಜಾಗವನ್ನು ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ.

ಸಹಾಯಕ ಕಮೀಷನರ್ ಅವರ ಆದೇಶದಂತೆ ಜಪ್ತಿ ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕೆರೆಬಳಿಯಲ್ಲಿ ನಾಸೀರ್ ಹಾಗೂ ಇತರರು ಇನಿಬ್ಬರ ಜಾಗದಲ್ಲಿ ಜಾನುವಾರು ವಧೆ ಮಾಡಿದ್ದಾರೆ.

ಪೊಲೀಸರು ಇನಿಬ್ಬರ ಮನೆ, ಕಸಾಯಿಖಾನೆಯ ಶೆಡ್ ಹಾಗೂ ಜಾನುವಾರು ಕಟ್ಟುವ ಶೆಡ್ , ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಟ್ಟು ಗ್ರಾಮದ ಮಹಮ್ಮದ್ ರಫೀಕ್ ಮನೆ, ಖಾಲಿ ಜಾಗ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿ ಮೊಹಮ್ಮದ್ ಮನ್ಸೂರ್ ಎಂಬಾತ ಜಾನುವಾರು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ನಗರದ ಕುದ್ರೋಳಿ ಬಳಿಯ ಜೆ.ಎಂ.ರಸ್ತೆಯ ಕಟ್ಟಡವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.




